ಮುಖ್ಯವಾಗಿ, ಇಲ್ಲಿನ ಪಂಪಿನಕೆರೆ, ಎಲೆಪೇಟೆ, ಜಯನಗರ, ರೋಷನಾರ್ನಗರ, ಪುಟಾಣಿ ನಗರ ಸೇರಿದಂತೆ ಹಲವು ಬಡಾವಣೆಗಳಿಗೆ ಸಹಜ ನೀರಿನ ಬುಗ್ಗೆಗಳಿಂದಲೇ ಪೂರೈಸಲಾಗುತ್ತಿತ್ತು. ಸಾಮಾನ್ಯವಾಗಿ ಬೇಸಿಗೆಗೂ ಮುನ್ನವೇ ಮಡಿಕೇರಿಯಲ್ಲಿ ಮಳೆ ಸುರಿಯುತ್ತಿತ್ತು. ಬೇಸಿಗೆಯಲ್ಲೂ ಆಗಾಗ್ಗೆ ಬಿರುಸಿನಿಂದ ಸುರಿಯುತ್ತಿದ್ದ ಮಳೆಯಿಂದ ಇಂತಹ ನೀರಿನ ಸೆಲೆಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾದರೂ ಬತ್ತುತ್ತಿರಲಿಲ್ಲ. ಆದರೆ, ಈ ಬಾರಿ ಈ ವರ್ಷದಲ್ಲಿ ಒಂದು ಹನಿಯೂ ಮಳೆ ಸುರಿಯದೇ ಇರುವುದರಿಂದ ನೀರಿನ ಸೆಲೆಗಳೆಲ್ಲವೂ ಬತ್ತಿವೆ. ಈಗ ಈ ಸೆಲೆಗಳಿಂದ ನೀರು ಪೂರೈಸುತ್ತಿದ್ದ ಬಡಾವಣೆಗಳಿಗೆ ಕೂಟುಹೊಳೆಯಿಂದಲೇ ನೀರು ಪೂರೈಸಲಾಗುತ್ತಿದೆ.