ಮಡಿಕೇರಿ: ಮರ ಕಡಿಯುವುದಕ್ಕಾಗಿ ಸರ್ವೇ ಮಾಡಿಕೊಡಲು ಲಂಚದ ರೂಪದಲ್ಲಿ ₹ 2 ಸಾವಿರ ನಗದು ಹಾಗೂ ಮದ್ಯದ ಬಾಟಲಿ ಪಡೆಯುತ್ತಿದ್ದ ವೇಳೆ ಇಲ್ಲಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ಮಾದಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
‘ಬಿ.ಬಾಡಗ ಗ್ರಾಮದ ತೋಟದಲ್ಲಿರುವ 3 ಬೀಟೆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಸರ್ವೇ ಮಾಡಿ ವರದಿ ನೀಡಲು ಮಾದಪ್ಪ ₹ 15 ಸಾವಿರ ಲಂಚವನ್ನು ದೂರುದಾರರಿಂದ ಮೊದಲೇ ಪಡೆದಿದ್ದರು. ಮತ್ತೆ ₹ 2 ಸಾವಿರ ಹಾಗೂ ಹಂಡ್ರೆಡ್ ಪೈಪರ್ ಅಥವಾ ಬ್ಲಾಕ್ ಡಾಗ್ ಮದ್ಯದ ಬಾಟಲಿ ನೀಡಲು ಒತ್ತಾಯಿಸಿದ್ದರು. ಇದರಿಂದ ಬೇಸರಗೊಂಡ ತೋಟದ ಮಾಲೀಕರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಮಂಗಳವಾರ ಸಂಜೆ ₹ 2 ಸಾವಿರ ನಗದು ಹಾಗೂ ಮದ್ಯದ ಬಾಟಲಿ ಪಡೆಯುವಾಗ ಮಾದಪ್ಪ ಅವರನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಲೋಕಾಯುಕ್ತ ಎಸ್.ಪಿ. ಸುರೇಶ್ಬಾಬು, ಡಿವೈಎಸ್ಪಿ ಎಂ.ಎಸ್.ಪವನ್ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್ ಕಾರ್ಯಾಚರಣೆಯಲ್ಲಿ ತಂಡದಲ್ಲಿದ್ದರು.