ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಶ್ರೀ ವಿನಾಯಕ ದೇವಸ್ಥಾನದ ಕಡೆಪೇಟೆ ಆವರಣಕ್ಕೆ ತರಲಾದ ಅಯೋಧ್ಯೆಯಿಂದ ಶ್ರೀ ರಾಮ ಜನ್ಮಭೂಮಿಯ ಮಂತ್ರಾಕ್ಷತೆಯನ್ನು ಕೊಡ್ಲಿಪೇಟೆ ಹಿಂದೂ ಸಮಾಜದವರು ಪೂರ್ಣ ಕುಂಭ ಕಳಸದೊಂದಿಗೆ ವಿಜೃಂಭಣೆಯಿಂದ ಸ್ವಾಗತಿಸಿದರು.
ವಿನಾಯಕ ದೇವಸ್ಥಾನದಿಂದ ಕೊಡ್ಲಿಪೇಟೆಯ ಮುಖ್ಯರಸ್ತೆಯಲ್ಲಿ ಮಹಿಳೆಯರು ಮತ್ತು ಹಿಂದೂ ಸಮಾಜದವರು ವಾದ್ಯಗೋಷ್ಠಿ ಹಾಗೂ ಮಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆ ಹೊರಟು ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಂತ್ರಾಕ್ಷತೆಯನ್ನು ಇರಿಸಲಾಯಿತು.
ಅರ್ಚಕ ಮೃತ್ಯುಂಜಯ ಅವರ ನೇತೃತ್ವದಲ್ಲಿ ಮಹಾಮಂಗಳಾರತಿ ಮತ್ತು ವಿಶೇಷಪೂಜೆ ನೆರವೇರಿಸಲಾಯಿತು. 2024 ಜನವರಿ ಮೊದಲನೇ ದಿನ ಕೊಡ್ಲಿಪೇಟೆಯ ಸುತ್ತಮುತ್ತಲಿನ ಮನೆ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸಲಾಗುವುದು ಎಂದು ಮುಖಂಡರು ತಿಳಿಸಿದರು.