ಮಡಿಕೇರಿ: ಪರಿಹಾರ ಅದಾಲತ್ನಲ್ಲಿ ಬಂದ 3,148 ಅರ್ಜಿಗಳ ಪೈಕಿ 1,577 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಸಮಸ್ಯೆ ಉಂಟಾಗಿ ಪರಿಹಾರ ಕಾಣದವರಿಗೆ ಹಮ್ಮಿಕೊಂಡಿದ್ದ ಪರಿಹಾರ ಅದಾಲತ್ ಯಶಸ್ವಿಯಾಗಿದೆ. ಈ ಪೈಕಿ 1,577 ಪ್ರಕರಣವನ್ನು ಸ್ಥಳದಲ್ಲಿದ್ದ ಅಧಿಕಾರಿಗಳ ಮೂಲಕ ಇತ್ಯರ್ಥ ಪಡಿಸಲಾಗಿದೆ. ಉಳಿದ 1,571 ಅರ್ಜಿ ಸ್ವೀಕೃತಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಹಾರ ಅದಾಲತ್ನಲ್ಲಿ ಸ್ವೀಕೃತವಾದ ಅಹವಾಲು ಅನ್ವಯ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಭಾಗಶಃ ಬೆಳೆ ಹಾನಿಗೆ ಪರಿಹಾರ ಪಾವತಿಯಾದ 4,487 ಪ್ರಕರಣಗಳಲ್ಲಿ ಸುಮಾರು ₹ 3.70 ಕೋಟಿ ಪರಿಹಾರ ಪಾವತಿಸಿರುವ ಪರಿಷ್ಕೃತ ಪಟ್ಟಿಯನ್ನು ಕೊಡಗು ಜಿಲ್ಲಾ ವೆಬ್ಸೈಟ್ನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ವೈಯಕ್ತಿಕ ಪ್ರಕರಣಗಳಲ್ಲಿ ₹ 92.79 ಕೋಟಿ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಅದಾಲತ್ನಲ್ಲಿ ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಕ್ಷೇತ್ರ ಪರಿಶೀಲನೆ ಮಾಡಿಸಿ, ನಂತರ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಳೆಹಾನಿ ಸಂಭವಿಸಿದ ಪ್ರಕರಣಗಳಲ್ಲಿ ಸರ್ಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.