ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು ಗ್ರಾಮದ ಕಾಫಿತೋಟದಿಂದ ಅರಕಲಗೂಡಿಗೆ ಮೂವರು ಆರೋಪಿಗಳು ಗೂಡ್ಸ್ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ಸೇರಿದಂತೆ ₹3.80 ಲಕ್ಷ ಮೌಲ್ಯದ 3 ಬೀಟೆ ನಾಟಾಗಳನ್ನು ಅರಣ್ಯ ವಲಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಗುಂಡೂರಾವ್ ಬಡಾವಣೆಯ ಎಚ್.ಎನ್.ಪುನೀತ ಹಾಗೂ ಜಾಬಿಕೋಡಿ ಗ್ರಾಮದ ಡಿ.ವಿ.ವಿನಯ್ ಬಂಧಿತ ಆರೋಪಿಗಳು.ಶಿರಂಗಾಲ ಗ್ರಾಮದ ಆರೋಪಿ ಸಾಬು ತಲೆಮರೆಸಿಡಿದ್ದಾರೆ.
ವಿಜಯಕುಮಾರ್ ಅವರ ತೋಟದಿಂದ ವಾಹನದಲ್ಲಿ ಅರಕಲಗೂಡಿಗೆ ಸಾಗಿಸುವಾಗ ದೊರೆತ ಮಾಹಿತಿ ಅನ್ವಯ ಹೊಸೂರು ರಸ್ತೆಯ ಬಾಪೂಜಿ ವಿದ್ಯಾಸಂಸ್ಥೆಯ ಬಳಿ ಅಡ್ಡಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಅರಣ್ಯ ವಲಯಾಧಿಕಾರಿ ಪ್ರಕರಣ ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ.ಕೊಟ್ರೇಶ್, ಉಪವಲಯಾಧಿಕಾರಿಗಳಾದ ಶ್ರೀನಿವಾಸ್, ಪ್ರಶಾಂತಕುಮಾರ್, ಅರಣ್ಯ ರಕ್ಷಕರಾದ ಲೋಹಿತ್, ಜಯಕುಮಾರ್, ದೊಡ್ಡಯ್ಯ ಹಾಗೂ ಹರೀಶ್ ಕುಮಾರ್ ಪಾಲ್ಗೊಂಡಿದ್ದರು.