ಮಡಿಕೇರಿ: ‘ಜಿಲ್ಲೆಯಲ್ಲಿರುವ 26 ಪರಿಹಾರ ಕೇಂದ್ರಗಳಲ್ಲಿ ಒಟ್ಟು 1,036 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 1,520 ಪುರುಷರು ಹಾಗೂ 1,663 ಮಹಿಳೆಯರು ಸೇರಿದಂತೆ ಒಟ್ಟು 3,183 ಜನರು ಸಂತ್ರಸ್ತರು ಇದ್ದಾರೆ’ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾಹಿತಿ ನೀಡಿದ್ದಾರೆ.
ಮಡಿಕೇರಿ ತಾಲ್ಲೂಕಿನ 18 ಪರಿಹಾರ ಕೇಂದ್ರಗಳಲ್ಲಿ 791 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 1,133 ಪುರುಷ ಮತ್ತು 1,216 ಮಹಿಳೆಯರು ಸೇರಿದಂತೆ ಒಟ್ಟು 2,349 ಜನರಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ 7 ಪರಿಹಾರ ಕೇಂದ್ರಗಳಲ್ಲಿ 239 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 375 ಪುರುಷ ಮತ್ತು 433 ಮಹಿಳೆಯರು ಸೇರಿದಂತೆ ಒಟ್ಟು 808 ಜನ ಸಂತ್ರಸ್ತರು ಇದ್ದಾರೆ. ವಿರಾಜಪೇಟೆ ತಾಲ್ಲೂಕಿನ 1 ಪರಿಹಾರ ಕೇಂದ್ರಗಳಲ್ಲಿ 6 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 12 ಪರುಷರು ಹಾಗೂ 14 ಮಹಿಳೆಯರು ಸೇರಿದಂತೆ ಒಟ್ಟು 26 ಜನರಿದ್ದಾರೆ ಎಂದು ತಿಳಿಸಿದ್ದಾರೆ.
ಪರಿಹಾರ ಕೇಂದ್ರಗಳಿಗೆ ಆಹಾರ ಸಾಮಗ್ರಿ ಪೂರೈಕೆ: ಸಂತ್ರಸ್ತರಿಗೆ ವಿತರಿಸಲು ಹೊರ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಜಿಲ್ಲೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಲ್ಲಿ ಇರಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನೆರೆ ಸಂತ್ರಸ್ತರಿಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಮೂಲಕ ಹಂಚಿಕೆ ಮಾಡಲು 30 ಲಘು ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2,735 ಕೆ.ಜಿ. ಅಕ್ಕಿ ವಿತರಣೆ: 2,735 ಕೆ.ಜಿ. ಅಕ್ಕಿ, 49 ಕೆ.ಜಿ. ಸಕ್ಕರೆ, 24 ಲೀಟರ್ ಎಣ್ಣೆ, 14 ಕೆ.ಜಿ. ತೊಗರಿ ಬೆಳೆ, 105 ಬಾಕ್ಸ್ ಕುಡಿಯುವ ನೀರಿನ ಬಾಟಲಿ, 21 ಹಾಲಿನ ಬಾಕ್ಸ್, 25 ಬಾಕ್ಸ್ ಬಿಸ್ಕೆಟ್, 299 ಹೊದಿಕೆಗಳು, 239 ಸ್ವೆಟರ್, 314 ಉಡುಗೆ ವಸ್ತು ಗಳನ್ನು ಜಿಲ್ಲಾಡಳಿತದ ವತಿಯಂದ ಆ.26ರಂದು ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸಾಂಕ್ರಾಮಿಕ ರೋಗ ತಡೆಯು ವುದು ಮತ್ತು ಅಸಾಂಕ್ರಾಮಿಕ ರೋಗ ಪತ್ತೆಹಚ್ಚಿ ಚಿಕಿತ್ಸೆ ನೀಡಲು 4 ತಂಡ ರಚಿಸಲಾಗಿದೆ. ಮಡಿಕೇರಿ ತಾಲ್ಲೂಕಿಗೆ 2, ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ 1, ವಿರಾಜಪೇಟೆಯಲ್ಲಿ 1 ತಂಡ ರಚಿಸ ಲಾಗಿದೆ. ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ, ಹಿರಿಯ ಆರೋಗ್ಯ ಸಹಾಯಕರು, 4 ಕಿರಿಯ ಆರೋಗ್ಯ ಸಹಾಯಕರು ಕಾರ್ಯ ನಿರ್ವಹಿಸಲಿದ್ದಾರೆ.
‘ಶುಚಿತ್ವ: ಜಾಗೃತಿ ವಹಿಸಿ’
ಪ್ರವಾಹ ನಂತರದ ಈ ಕಾಲಾವಧಿಯಲ್ಲಿ ಮುಖ್ಯವಾಗಿ ಗಾಳಿ, ನೀರು, ಆಹಾರ ಮತ್ತು ಕೀಟಗಳಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂಭವವಿದೆ. ಕಲುಷಿತ ಗಾಳಿಯಿಂದ ಶೀತ, ಗಂಟಲು ನೋವು, ವಿಷಮ ಶೀತ ಜ್ವರ, ಶ್ವಾಸಕೋಶ ಸೋಂಕು (ನ್ಯುಮೋನಿಯಾ, ಕ್ಷಯ) ಇತ್ಯಾದಿ ರೋಗಗಳು ಬರುತ್ತವೆ. ಆದ್ದರಿಂದ ಶುಚಿತ್ವದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.