ಸೋಮವಾರಪೇಟೆ: ‘ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಎಲ್ಲರೂ ಪಾಲಿಸಿ, ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುವ ಮೂಲಕ ಶ್ರೀರಾಮನವಮಿ ಉತ್ಸವ ನಡೆಸಬೇಕು’ ಎಂದು ಡಿವೈಎಸ್ಪಿ ಗಂಗಾಧರಪ್ಪ ಸೂಚಿಸಿದರು.
ಏ. 17ರಂದು ಪಟ್ಟಣದಲ್ಲಿ ಆಯೋಜಿಸಿರುವ ಶ್ರೀರಾಮನವಮಿ ಉತ್ಸವದ ನಿಮಿತ್ತ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಉತ್ಸವದ ಆಯೋಜಕರು, ಸ್ತಬ್ಧಚಿತ್ರಗಳ ಆಯೋಜಕರಿಗೆ ಮಾಹಿತಿ ನೀಡಿದರು.
‘ಸ್ತಬ್ಧಚಿತ್ರಗಳ ಆಯೋಜಕರಿಗೆ ಉತ್ಸವ ಸಂಬಂಧಿತ ನಿರ್ದೇಶನಗಳನ್ನು ನೀಡಿದ ಅವರು, ನಿಗದಿತ ಸಮಯದಲ್ಲಿ ಸ್ತಬ್ಧಚಿತ್ರ ಮೆರವಣಿಗೆ ಹೊರಟು ಮುಗಿಸಿ ವಾಪಸ್ ಬರಬೇಕು. ಶಬ್ದಮಾಲಿನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಧಿಕ ಶಬ್ದ ಹೊರಹಾಕುವ ಸೌಂಡ್ಸ್ಗಳನ್ನು ಬಳಸಬಾರದು’ ಎಂದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಿಂದ ಒಟ್ಟು 10 ಸ್ತಬ್ಧಚಿತ್ರಗಳ ಬರುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಒದಗಿಸಬೇಕೆಂದು ವೇದಿಕೆಯ ದರ್ಶನ್ ಜೋಯಪ್ಪ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿವೈಎಸ್ಪಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗುವುದು ಎಂದರು.
ವೇದಿಕೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಸಂತ್, ಠಾಣಾಧಿಕಾರಿಗಳಾದ ರಮೇಶ್ ಕುಮಾರ್, ಪ್ರಹ್ಲಾದ್ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಸುಭಾಷ್ ತಿಮ್ಮಯ್ಯ, ಎಂ.ಬಿ. ಉಮೇಶ್, ಹೇಮಂತ್, ಸುರೇಶ್, ಶಶಿಕಾಂತ್ ಉಪಸ್ಥಿತರಿದ್ದರು.