ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ | ಗ್ರೇಡ್‌ನಲ್ಲಿ ಮುಂದೆ, ವೈಜ್ಞಾನಿಕ ವಿಲೇವಾರಿಯಲ್ಲಿ ಹಿಂದೆ!

ಬೇಳೂರು ಗ್ರಾಮ ಪಂಚಾಯಿತಿಯನ್ನೂ ಬಿಡದ ಕಸದ ಸಮಸ್ಯೆ
Published 10 ಫೆಬ್ರುವರಿ 2024, 4:58 IST
Last Updated 10 ಫೆಬ್ರುವರಿ 2024, 4:58 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಗ್ರೇಡ್‌ – 1 ‍ಗ್ರಾಮಪಂಚಾಯಿತಿ ಎಂದು ಹೆಸರು ಪಡೆದಿರುವ ಇಲ್ಲಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಬೇಳೂರು ಪಂಚಾಯಿತಿಯಲ್ಲೂ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನಕಳೆದಂತೆ ಉಲ್ಬಣಿಸುತ್ತಿದೆ. ವೈಜ್ಞಾನಿಕವಾದ ವಿಲೇವಾರಿ ಕ್ರಮ ಇಲ್ಲದೇ ಜನಸಾಮಾನ್ಯರು ಕಿರಿಕಿರಿ ಅನುಭವಿಸಬೇಕಾಗಿದೆ.

ಕಸ ವಿಲೇವಾರಿ ಮಾಡಲೆಂದು ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕ ಇನ್ನೂ ಪಂಚಾಯಿತಿಗೆ ಹಸ್ತಾಂತರವಾಗಿಲ್ಲ. ಇದರಿಂದ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ.

ಹೆಚ್ಚಿನವರು ಹೆದ್ದಾರಿಯ ಬದಿಯಲ್ಲಿಯೇ ಕಸವನ್ನು ಎಸೆಯುವುದು ಸಾಮಾನ್ಯವಾಗಿದೆ. ಇಲ್ಲಿ ಸಂಚರಿಸುವವರು ಮೂಗು ಮುಚ್ಚಿ ಓಡಾಡಬೇಕಾಗಿದೆ.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಪಂಚಾಯಿತಿ ಕಚೇರಿಗೆ ಕೂಗಳತೆ ದೂರದಲ್ಲಿಯೇ ತ್ಯಾಜ್ಯ ವಿಲೇವಾರಿಯಾಗುತ್ತಿದ್ದು, ಇದೇ ಮಾರ್ಗದಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖೆಗಳ ಅಧಿಕಾರಿಗಳು ಸಂಚರಿಸುತ್ತಾರೆ. ಆದರೆ, ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಹಿಡಿಯಲು ವಿಫಲರಾಗಿದ್ದಾರೆ ಎಂದು ಜನರು ದೂರುತ್ತಾರೆ.

ಸೋಮವಾರಪೇಟೆ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಕಸ ಸುರಿಯುತ್ತಿರುವ ಸ್ಥಳೀಯ ಮಹಿಳೆ.
ಸೋಮವಾರಪೇಟೆ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಕಸ ಸುರಿಯುತ್ತಿರುವ ಸ್ಥಳೀಯ ಮಹಿಳೆ.

ನಗರದಿಂದ 3 ಕಿ.ಮೀ ದೂರದಲ್ಲಿರುವ ಬಜೆಗುಂಡಿ 40 ಎಕರೆ ಪ್ರದೇಶದಲ್ಲಿ, 400 ಮನೆಗಳಿದ್ದು, 600ರಷ್ಟು ಕುಟುಂಬಗಳಿವೆ. ಸುಮಾರು 2 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, 1,180 ಮತದಾರರಿದ್ದಾರೆ. ಇಲ್ಲಿ 150 ಅಲ್ಪಸಂಖ್ಯಾತರ ಕುಟುಂಬಗಳು, 200 ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ 250 ಇತರ ವರ್ಗದ ಕುಟುಂಬಗಳಿವೆ.

ಎಲ್ಲಾ ಪಂಚಾಯಿತಿಗಳಲ್ಲಿರುವಂತೆ, ಬೇಳೂರು ಪಂಚಾಯಿತಿ ವ್ಯಾಪ್ತಿಯಲ್ಲೂ ಕಸ ವಿಲೇವಾರಿಯ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇಲ್ಲಿನ ಜನರು ಬೆಳಿಗ್ಗೆ ಮತ್ತು ಸಂಜೆಯಾದರೆ, ತಮ್ಮ ಮನೆಯಲ್ಲಿನ ಕಸವನ್ನು ಹೆದ್ದಾರಿ ಬದಿಯಲ್ಲಿಯೇ ತಂದು ಸುರಿಯುತ್ತಾರೆ.

ಸೋಮವಾರಪೇಟೆ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಕಸ ಸುರಿದಿರುವುದು.
ಸೋಮವಾರಪೇಟೆ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಕಸ ಸುರಿದಿರುವುದು.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳಿಯ ನಿವಾಸಿ, ಆಟೊ ಚಾಲಕ ಶಶಿ, ‘ಹಲವು ವರ್ಷಗಳ ಹಿಂದಿನಿಂದಲೂ ಇಲ್ಲಿ ಸಮಸ್ಯೆಗಳು ಕಾಡುತ್ತಿವೆ. ಯಾರೇ ಅಧಿಕಾರ ಮಾಡಿದರೂ, ಈ ಸಮಸ್ಯೆಗೆ ಪರಿಹಾರ ಕಾಣಿಸಲು ಮುಂದಾಗಿಲ್ಲ. ಕೂಡಲೇ ಇಲ್ಲಿನ ಕಸ ವಿಲೇವಾರಿಗೆ ಸರಿಯಾದ ಸ್ಥಳ ಗುರುತಿಸಿ, ಸೂಕ್ತವಾಗಿ ವಿಲೇವಾರಿ ಮಾಡಲು ಮುಂದಾಗಬೇಕಿದೆ’ ಎಂದರು.

ಹೆದ್ದಾರಿಯ ಪಕ್ಕದಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಮೂಗು ಮುಚ್ಚಿಯೆ ಗ್ರಾಮಕ್ಕೆ ಪ್ರವೇಶ ಪಡೆಯುವಂತಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪೇಪರ್ ಇರುವುದರಿಂದ ಗಾಳಿ ಬಂದೊಡನೆ ಎಲ್ಲೆಂದರಲ್ಲಿ ಹಾರಿ ಬಿದ್ದಿರುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರತ್ತ ನೋಡದೆ ಸಂಚರಿಸುತ್ತಿರುವುದು, ಸಮಸ್ಯೆ ಜೀವಂತವಾಗಿ ಉಳಿಯುವಂತಾಗಿದೆ. ಸರ್ಕಾರ ಸಾಕಷ್ಟು ಹಣವನ್ನು ತ್ಯಾಜ್ಯ ವಿಲೇವಾರಿಗೆ ವಿನಿಯೋಗಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ ನೀಡಬೇಕು ಎಂದು ಕೆ.ಪಿ.ದಿನೇಶ್ ಹೇಳಿದರು.

ಸೋಮವಾರಪೇಟೆ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಕಸ ವಿಲೇವಾರಿಗೆ ಕಟ್ಟಡ ನಿರ್ಮಾಣವಾಗುತ್ತಿದ್ದು ಸ್ಥಳಕ್ಕೆ ಜಿ.ಪಂ ಉಪ ಕಾರ್ಯದರ್ಶಿ  ಜಿ. ಧನರಾಜು ಭೇಟಿ ನೀಡಿ ಕಾಮಗಾರಿ ವೀಕ್ಷಣ ಮಾಡಿದರು.
ಸೋಮವಾರಪೇಟೆ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಕಸ ವಿಲೇವಾರಿಗೆ ಕಟ್ಟಡ ನಿರ್ಮಾಣವಾಗುತ್ತಿದ್ದು ಸ್ಥಳಕ್ಕೆ ಜಿ.ಪಂ ಉಪ ಕಾರ್ಯದರ್ಶಿ  ಜಿ. ಧನರಾಜು ಭೇಟಿ ನೀಡಿ ಕಾಮಗಾರಿ ವೀಕ್ಷಣ ಮಾಡಿದರು.
ಒಂದು ವಾರದಲ್ಲಿ ಕಟ್ಟಡ ಹಸ್ತಾಂತರ; ಪಿಡಿಒ ರವಿ
ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಬೇಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ‘ಗ್ರಾಮದ ಸ್ಮಶಾನದ ಬಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸಿ ₹ 11.5 ಲಕ್ಷದ ಕಟ್ಟಡ ನಿರ್ಮಾಣವಾಗುತ್ತಿದ್ದು ಮುಂದಿನ ಒಂದು ವಾರದಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಳ್ಳಲಿದೆ. ಬಳಿಕ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು’ ಎಂದು ಹೇಳಿದರು. ಕಟ್ಟಡ ನಿರ್ಮಾಣದ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಿ.ಧನರಾಜು ಭೇಟಿ ನೀಡಿ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು. ಗ್ರಾಮದ ಜನರಿಗೆ ಎಷ್ಟೇ ಮಾಹಿತಿ ನೀಡಿದರೂ ಕಸವನ್ನು ರಸ್ತೆ ಪಕ್ಕದಲ್ಲಿಯೇ ಸುರಿಯುತ್ತಿದ್ದಾರೆ. . ಈಗಾಗಲೇ ಎಲ್ಲ ಮನೆಗಳಿಗೆ ತ್ಯಾಜ್ಯ ಸಂಗ್ರಹಿಸಲು ಬಕೆಟ್ ನೀಡಲಾಗಿದೆ. ಒಂದು ವಾರದ ನಂತರ ಮನೆ ಮನೆಗೆ ಪಂಚಾಯಿತಿ ವಾಹನ ತೆರಳಿ ಕಸ ಸಂಗ್ರಹಿಸಿ ವಿಲೇವಾರಿಗೆ ಮುಂದಾಗಲಾಗುವುದು. ನಂತರವೂ ರಸ್ತೆ ಬದಿಯಲ್ಲಿ ಕಸ ಸುರಿದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT