ಶನಿವಾರಸಂತೆ: ‘ಮಣ್ಣು ಆರೋಗ್ಯವಾಗಿದ್ದರೆ ಉತ್ತಮ ಫಸಲು ಪಡೆಯಬಹುದು’ ಎಂದು ನಿಡ್ತ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಡಿ.ಎಸ್.ಮಧುಕುಮಾರ್ ತಿಳಿಸಿದರು.
ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮ ಹುಣಸೂರು, ಕೃಷಿ ಇಲಾಖೆ, ನಿಡ್ತ ಸರ್ಕಾರಿ ಪ್ರೌಢಶಾಲೆಯ ನಿಸರ್ಗ ಯುಕೊ ಕ್ಲಬ್ ಮತ್ತು ಹಾರೆಹೊಸೂರು ಸರ್ಕಾರಿ ಪ್ರಾಥಮಿಕ ಶಾಲೆ ವತಿಯಿಂದ ಹಾರೆಹೊಸೂರು ಗ್ರಾಮದ ಧರ್ಮಪ್ಪ ಅವರ ಕಾಫಿ ತೋಟದಲ್ಲಿ ಮಂಗಳವಾರ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅರಣ್ಯ, ಪರಿಸರ ಸಮೃದ್ಧಿ ಸೇರಿದಂತೆ ರೈತರು ಬೆಳೆಯುವ ವಿವಿಧ ಕೃಷಿ ಬೆಳೆಗಳು ಸುದ್ದಿಯಾಗಲು ಭೂಮಿಯ ಮಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಮಣ್ಣಿನ ಆರೋಗ್ಯ ಉತ್ತಮವಾಗಿದ್ದರೆ ಭೂಮಿಯ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಇದರಿಂದ ಭೂಮಿಯ ಮೇಲೆ ಇರುವ ಮರ, ಗಿಡ ಸಸ್ಯ ಸಂಕುಲ ಸಮೃದ್ಧಿಗೊಳ್ಳುವುದರ ಜೊತೆಯಲ್ಲಿ ರೈತರು ಬೆಳೆಯುವ ವಿವಿಧ ಕೃಷಿ ಬೆಳೆಗಳು ಸಹ ಸಮೃದ್ಧಿಯಾಗಿ ಬೆಳೆಯುತ್ತದೆ ಎಂದರು.
ಶನಿವಾರಸಂತೆ ಕೃಷಿ ಅಧಿಕಾರಿ ವೇದಪ್ರಿಯಾ ಮಾತನಾಡಿ, ‘ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸಲು ತಮ್ಮ ಜಮೀನುಗಳಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಉತ್ತಮವಾಗಿ ವ್ಯವಸಾಯ ಮಾಡಬೇಕು’ ಎಂದು ಸಲಹೆ ನೀಡಿದರು.
ದಿನದ ಮಹತ್ವ ಕುರಿತು ಹಾರೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಂದರ್ ಮಾತನಾಡಿದರು.
ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್.ಕಾರ್ಯಪ್ಪ, ಖಜಾಂಜಿ ಬಿ.ಕೆ.ಚಿಣ್ಣಪ್ಪ ಅವರು ಲಯನ್ಸ್ ಸಂಸ್ಥೆಯ ಸಾಮಾಜಿಕ ಸೇವೆಗಳ ಕುರಿತು ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ಸದಸ್ಯರಾದ ಕೇಶವಮೂರ್ತಿ, ಧರ್ಮಪ್ಪ, ಬಿ.ಬಿ.ನಾಗರಾಜು, ಕೃಷಿಕ, ನಾಟರಾಜ, ತೋಟದ ಮಾಲೀಕ ಹಾರೆಹೊಸೂರು ಧರ್ಮಪ್ಪ ಇದ್ದರು.