ಮಡಿಕೇರಿ: ಟಿಪ್ಪು ಜಯಂತಿಯನ್ನು ಯಾವುದೇ ಕಾರಣಕ್ಕೂ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಬಾರದು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಇದೇ ವೇಳೆ ಹುತಾತ್ಮ ಕುಟ್ಟಪ್ಪ ದಿನಾಚರಣೆಗೂ ಅವಕಾಶ ನೀಡುವಂತೆ ಕಾರ್ಯಕರ್ತರು ಕೋರಿದರು.
‘ಟಿಪ್ಪು ಕ್ರೌರ್ಯ ಹಾಗೂ ಮೋಸಗಳಿಂದಲೇ ಇತಿಹಾಸದಲ್ಲಿ ಸ್ಥಾನ ಪಡೆದಿದ್ದಾನೆಯೇ ಹೊರತು, ಸ್ವಾತಂತ್ರ್ಯ ಹೋರಾಟಗಾರನಾಗಿ ಅಲ್ಲ; ಟಿಪ್ಪು ಕನ್ನಡದ ಉಳಿವಿಗಾಗಿ ಕೆಲಸ ಮಾಡಿಯೇ ಇಲ್ಲ. ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ ಕೊಡವರ ನರಮೇಧ ನಡೆಸಿದ್ದ ವ್ಯಕ್ತಿ. ಮತಾಂತರ ಮಾಡಿದ್ದಾನೆ. ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಆತನ ಜಯಂತಿ ನಡೆಸಬಾರದು’ ಎಂದು ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ಕಾಳನ ರವಿ ಮಾತನಾಡಿ, ‘ಟಿಪ್ಪು ಜಯಂತಿ ತಡೆಯುವ ನಿಟ್ಟಿನಲ್ಲಿ ನಮ್ಮ ಹೋರಾಟ ಆರಂಭವಾಗಿದೆ. 2015ರ ನ. 10ರಂದು ಟಿಪ್ಪು ಜಯಂತಿಯಂದು ಹುತಾತ್ಮರಾದ ಕುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ನ. ೧೦ರಂದು ಕುಟ್ಟಪ್ಪ ಜಯಂತಿಯನ್ನು ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.
‘ಟಿಪ್ಪು ಜಯಂತಿಯನ್ನು ನಾಲ್ಕು ಗೋಡೆಗಳ ಮಧ್ಯೆ ಸರ್ಕಾರ ಆಚರಣೆ ಮಾಡಿದಂತೆ ಕುಟ್ಟಪ್ಪ ಜಯಂತಿ ಆಚರಿಸುವುದಿಲ್ಲ. ಬಹಿರಂಗ ವೇದಿಕೆಯಲ್ಲಿ ಆಚರಣೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಕೆ.ಟಿ. ಪ್ರಶಾಂತ್, ನಗರ ಘಟಕದ ಅಧ್ಯಕ್ಷ ಡಿಶು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ಯುವ ಮೋರ್ಚಾ ಮುಖಂಡರಾದ ಬಿ.ಎಸ್. ಪ್ರಶಾಂತ್ ಕುಮಾರ್, ಧನಂಜಯ, ಕಿಶೋರ್ ಕುಮಾರ್ ಪ್ರತಿಭಟನೆಯಲ್ಲಿ ಹಾಜರಿದ್ದರು.