ಮಡಿಕೇರಿ: ಇಲ್ಲಿನ ಸಂತ ಜೋಸೆಫರ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಊಟಕ್ಕೂ ಪರದಾಡಿದ ಪ್ರಸಂಗ ವರದಿಯಾಗಿದೆ.
ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಹಾಗೂ ಎರಡನೇ ಮತ್ತು ಮೂರನೇ ಪೊಲಿಂಗ್ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಸಂತ ಜೋಸೆಫರ ಶಾಲೆಯಲ್ಲಿ ಚುನಾವಣಾ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆಂದು ಜಿಲ್ಲಾಡಳಿತದ ವತಿಯಿಂದ ಮಧ್ಯಾಹ್ನದ ಊಟವನ್ನು ಸಿದ್ದ ಪಡಿಸಲಾಗಿತ್ತು. ಆದರೆ, ಊಟಕ್ಕೆಂದು ಸಿದ್ಧಪಡಿಸಿದ್ದ ಅನ್ನವು ಸರಿಯಾಗಿ ಬೆಂದಿರಲಿಲ್ಲ. ಅನ್ನ ಮುಳ್ಳು ಅಕ್ಕಿಯಾಗಿದ್ದ ಪರಿಣಾಮ ಅಧಿಕಾರಿಗಳು ಅಸಮಾಧಾನಗೊಂಡು ಹೊರ ಬಂದರು. ಊಟಕ್ಕೆಂದು ಹೋಟೆಲ್ಗಳನ್ನು ಹುಡುಕಿಕೊಂಡು ಅಲೆದಾಡಿದರು.
ಈ ಸಂದರ್ಭ ಕೆಲ ಅಧಿಕಾರಿಗಳು ಊಟದ ಬಗ್ಗೆ ಅಸಮಾಧಾನಗೊಂಡು ತಮ್ಮ ಮೇಲಾಧಿಕಾರಿಗಳ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ ಪ್ರಸಂಗವೂ ನಡೆದಿದೆ.
ನಗರದ ಹಲವು ಹೋಟೆಲ್ಗಳಲ್ಲಿ ಎಲ್ಲರಿಗೂ ಊಟ ಸಿಗದ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳು ಊಟವಿಲ್ಲದೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಜಿಲ್ಲಾಡಳಿತದ ಗಮನಕ್ಕೂ ತರಲಾಯಿತು ಎಂದು ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ದೂರವಾಣಿ ಮೂಲಕ ತಿಳಿಸಿದರು.
ತರಬೇತಿ ಕಾರ್ಯಾಗಾರ
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಿ.ಪ್ರಭು, ವಿಧಾನಸಭೆ ಚುನಾವಣಾ ತರಬೇತಿ ನೋಡಲ್ ಅಧಿಕಾರಿ ಶ್ರಿನಿವಾಸರಾವ್, ಚುನಾವಣಾ ತರಬೇತಿ ಸಹಾಯಕ ನೋಡಲ್ ಅಧಿಕಾರಿ ಲಿಂಗರಾಜು, ಸೆಕ್ಟರ್ ಅಧಿಕಾರಿ ಪ್ರಶಾಂತ್, ಸೆಕ್ಟರ್ ಅಧಿಕಾರಿಗಳಾದ ಭಾಗಮಂಡಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದಿವಾಕರ್, ಕುಶಾಲನಗರದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ತಿಲಗಾರ್ ಹಲವು ಮಾಹಿತಿ ನೀಡಿದರು.