ವಿರಾಜಪೇಟೆ: ಸಮೀಪದ ಬಿಟ್ಟಂಗಾಲದ ನಾಂಗಾಲದಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಷೇಧಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ನೀಡಿದೆ.
ನಾಂಗಾಲ ಗ್ರಾಮದಲ್ಲಿ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದ ವರದಿಯ ಆಧಾರದ ಮೇಲೆ ಪರಿಶೀಲನೆ ನಡೆಸಿ ಈ ಆದೇಶ ಹೊರಡಿಸಲಾಗಿದೆ.
ಹೊರ ರಾಜ್ಯದ ವ್ಯಕ್ತಿಯೊಬ್ಬರು `ಬಿಟ್ಟಂಗಾಲ ಗ್ರಾನೈಟ್ಸ್ ಸ್ಟೋನ್ ಕೃಷರ್~ ಹೆಸರಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಗಣಿಗಾರಿಕೆ ಆರಂಭದಿಂದಲೇ ನಿರಂತರ ಅಹಿತಕರ ಘಟನೆಗಳು ನಡೆಯುತ್ತಿದ್ದವು.
ಇದೇ ಗಣಿಗಾರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ಸಂಸ್ಥೆಯ ನೌಕರನ ಕೊಲೆಯೂ ನಡೆದಿತ್ತು. ಗಣಿಗಾರಿಕೆಗಾಗಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ನೀಡಿದ್ದ ನಿರಾಕ್ಷೇಪಣಾ ಪತ್ರ ಹಿಂದಕ್ಕೆ ಪಡೆದಿದೆ.
ನಿಷೇಧಕ್ಕೆ ಮಾನ್ಯತೆ
ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಗ್ರಾಮ ಸಂಪರ್ಕ ಸಭೆಯು ಈಚೆಗೆ ವಿ.ಬಾಡಗದ ಈಶ್ವೀರಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಯೋಜನಾಧಿಕಾರಿ ಗಣಪತಿ ಗಣಿಗಾರಿಕೆ ನಿಷೇಧದ ಆದೇಶವನ್ನು ಸಭೆ ಮುಂದೆ ಮಂಡಿಸಿದಾಗ ಸಭೆ ನಿಷೇಧಕ್ಕೆ ಮಾನ್ಯತೆ ನೀಡಿತು.
ಪಂಚಾಯಿತಿ ಸದಸ್ಯ ಚೇಂದ್ರಿಮಾಡ ಗಣೇಶ್ ನಂಜಪ್ಪ ಮಾತನಾಡಿ ಬಿಟ್ಟಂಗಾಲದಿಂದ ನಾಂಗಾಲಕ್ಕೆ ಹೋಗುವ ಜಂಕ್ಷನ್ನಲ್ಲಿ ನಿಷೇಧದ ಆದೇಶವನ್ನು ನಾಮಫಲಕದಲ್ಲಿ ನಮೂದಿಸುವಂತೆ ಸಲಹೆ ಮಾಡಿದರು.
ಪಂಚಾಯಿತಿ ಅಧ್ಯಕ್ಷ ರಾಜು ದೇವಯ್ಯ ಅಧ್ಯಕ್ಷತೆ ವಹಿಸಿದರು. ಇದಕ್ಕೆ ಸಭೆ ಸಮ್ಮತಿ ನೀಡಿ ನಿರ್ಣಯ ಅಂಗೀಕರಿಸಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಬಾಂಡ್ ಗಣಪತಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಧರಣಿಕಟ್ಟಿ, ನೋಡಲ್ ಅಧಿಕಾರಿ ಕೆ.ಪಿ.ದೇವಕಿ ಹಾಗೂ ಗ್ರಾಮಸ್ಥರು ಇದ್ದರು.