ಮಡಿಕೇರಿ: ಬಹುದಿನಗಳ ಕನಸಾಗಿದ್ದ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿ ರುವುದು ಒಂದೆಡೆ ಸಂತಸ ತಂದಿದ್ದರೆ, ಮತ್ತೊಂದೆಡೆ ಕಟ್ಟಡ ನಿರ್ಮಿಸಲಾಗುತ್ತಿ ರುವ ಸ್ಥಳದ ಕೆಳಭಾಗದ ಮಣ್ಣು ಕುಸಿಯುತ್ತಿ ರುವುದು ಆತಂಕ ಮೂಡಿಸಿದೆ.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಸರ್ಕಾರಿ ವರ್ಕ್ಶಾಪ್ ಇದ್ದ ಸ್ಥಳದಲ್ಲಿ ಸುಮಾರು 2.2 ಎಕರೆ ಪ್ರದೇಶದಲ್ಲಿ ಈ ಕಟ್ಟಡವನ್ನು ನಿರ್ಮಿಸ ಲಾಗುತ್ತಿದೆ. ಕಾಮಗಾರಿ ಕಳೆದ ವರ್ಷ ಏಪ್ರಿಲ್ನಲ್ಲಿ ಆರಂಭಗೊಂಡಿದ್ದು, ನಿರೀಕ್ಷಿತ ಮಟ್ಟಕ್ಕಿಂತ ವೇಗವಾಗಿದೆ.
ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿ ಕೈಗೆತ್ತಿಕೊಂಡಿದ್ದು, ಬೆಂಗಳೂರಿನ ಕಂಪೆನಿಯೊಂದು ಯೋಜನೆಯನ್ನು ಅನುಷ್ಠಾನಗೊಳಿ ಸುತ್ತಿದೆ. ಕಾಮಗಾರಿಗಾಗಿ ರೂ 14.44 ಕೋಟಿ ಅಂದಾಜು ಮೊತ್ತ ನಿಗದಿಪಡಿಸಲಾಗಿದೆ.
ಆದರೆ, ಈ ಜಾಗವು ಬೆಟ್ಟದ ತುದಿಯ ಮೇಲಿದ್ದು, ಕೆಳಗಿನ ಭಾಗವು ಮಣ್ಣಿನಿಂದ ಕೂಡಿದೆ. ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಈ ಭಾಗದ ಮಣ್ಣು ಕುಸಿಯಲು ಆರಂಭಿಸಿದೆ.
ಮಣ್ಣು ಕುಸಿಯುವುದನ್ನು ತಡೆಯಲು ತಡೆಗೋಡೆ ನಿರ್ಮಿಸುವ ಯಾವುದೇ ಕೆಲಸವನ್ನು ಇದುವರೆಗೆ ಕೈಗೊಂಡಿಲ್ಲ. ಹೀಗಾಗಿ ಮಣ್ಣು ಕುಸಿತ ಆರಂಭವಾಗಿದೆ. ಸದ್ಯಕ್ಕೆ ಅಲ್ಪಪ್ರಮಾಣದಲ್ಲಿ ಕುಸಿತ ಕಂಡುಬಂದಿದ್ದು, ಮಳೆ ಇನ್ನಷ್ಟು ಹೆಚ್ಚಾದಲ್ಲಿ ಮಣ್ಣು ಕುಸಿತ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
34 ಕಚೇರಿಗಳಿಗೆ ಸ್ಥಳ:
ಪ್ರಸ್ತುತ ಕೋಟೆ ಆವರಣದಲ್ಲಿರುವ ಅರಮನೆಯಲ್ಲಿ ಜಿಲ್ಲಾಡಳಿತದ ಬಹುತೇಕ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಟ್ಟಡವನ್ನು ತೆರವುಗೊಳಿಸುವಂತೆ ಪ್ರಾಚ್ಯ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಹೊಸ ಕಟ್ಟಡ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ.
ಹೊಸ ಕಟ್ಟಡದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಕಚೇರಿ, ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ವಿಡಿಯೋ ಕಾನ್ಫರೆನ್ಸ್ ಕೊಠಡಿ, ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ನೋಂದಣಿ ಇಲಾಖೆ, ಸಣ್ಣ ಉಳಿತಾಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗಳು ಸೇರಿದಂತೆ ಒಟ್ಟು 34 ಕಚೇರಿಗಳಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.
ಇಲ್ಲಿಗೆ ಆಗಮಿಸುವ ಜನರ ಅನುಕೂಲಕ್ಕಾಗಿ ಕ್ಯಾಂಟೀನ್, ಅಂಚೆ ಇಲಾಖೆ, ಬ್ಯಾಂಕ್ ಶಾಖೆಯನ್ನು ಸಹ ತೆರೆಯಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.