ಸೋಮವಾರಪೇಟೆ: ರೈತರು ರಾಸಾಯನಿಕ ಕೃಷಿಯನ್ನು ಕಡಿಮೆಮಾಡಿ ಸಾವಯವ ಪದ್ಧತಿಯಡಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಲ್ಲಿ ಗುಣಮಟ್ಟ ಹಾಗೂ ಉತ್ತಮ ಆಹಾರ ಪದಾರ್ಥಗಳನ್ನು ಉತ್ಪಾದಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಪಟ್ಟರು.
ಕೋಪಟ್ಟಿ ಗ್ರಾಮದ ಧವಸ ಭಂಡಾರ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೋಪಟ್ಟಿ ಗ್ರಾಮದ ಮಹಾವಿಷ್ಣು ಸಾವಯವ ಕೃಷಿಕರ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಾವಯವ ಬೆಳೆ ಕ್ಷೇತ್ರೋತ್ಸವ ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾವ ಯವ ಕೃಷಿ ಪದ್ಧತಿ ಸಹಕಾರಿಯಾಗಿದ್ದು, ಈ ಪದ್ಧತಿಯಡಿ ಬೆಳೆದ ಬೆಳೆಗಳು ರಾಸಾಯನಿಕ ರಹಿತ ವಾಗಿದ್ದು, ಆರೋಗ್ಯಕ್ಕೆ ಉತ್ತಮ ಎಂದರು.
ಸಾವಯವ ಗ್ರಾಮ ಯೋಜನೆಯ ಅಧ್ಯಕ್ಷ ಡಿ.ಎಸ್. ಶಿವಾಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಬಬ್ಬೀರ ಸರಸ್ವತಿ, ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಕುಮಾರ್, ಕೃಷಿಕರ ಸಮಾಜದ ಅಧ್ಯಕ್ಷ ಶಂಭುಮುತ್ತಪ್ಪ, ಜಂಟಿ ಕೃಷಿ ನಿರ್ದೇಶಕ ಸದಾಶಿವ, ಜಿಲ್ಲಾ ಸಮನ್ವಯಾಧಿಕಾರಿ ನಾರಾಯಣ್, ಸಹಾಯಕ ಕೃಷಿ ನಿರ್ದೇಶಕ ಮಹದೇವ್, ಗ್ರಾಮ ಪಂಚಾಯಿತಿ ಸದಸ್ಯ ವಿಠಲ್, ಬಿ.ಎಂ. ಬಸಪ್ಪ ಸೇರಿದಂತೆ ಹಾಜರಿದ್ದರು.