ಕೋಲಾರ: ‘ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿವಾಗಿ ವಿಲೇವಾರಿ ಮಾಡದಿದ್ದರೆ ಟೆಂಡರ್ದಾನ ವಿರುದ್ಧ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳವರು ಎಲ್ಲಂದರಲ್ಲಿ ತ್ಯಾಜ್ಯವನ್ನು ಬಿಸಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ತ್ಯಾಜ್ಯ ಸಂಗ್ರಿಸಬೇಕು’ ಎಂದು ಸೂಚಿಸಿದರು.
‘ಇಲಾಖೆ ಕಾಯ್ದೆ ಪ್ರಕಾರ ತ್ಯಾಜ್ಯ ವಿಲೇವಾರಿಯ ಕರಾರು ಮೀರಾ ಏಜೆನ್ಸಿಗೆ ಟೆಂಡರ್ ನೀಡಲಾಗಿದೆ. ಆದರೆ ಏಜೆನ್ಸಿಯವರು ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ. ಎಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ವಿಲೇವಾರಿಯನ್ನು ಚುರುಕುಗೊಳಿಸದಿದ್ದರೆ ಕ್ರಮಜರುಗಿಸಲಾಗುವುದು’ ಎಂದರು.
‘ನಿಗಧಿ ಪಡೆಸಿರುವ ಬಣ್ಣದ ಬ್ಯಾಗ್ಗಲ್ಲಿ ತ್ಯಾಜ್ಯ ತುಂಬಿಸಬೇಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ದಿನ, ತಾಲ್ಲೂಕು ಕೇಂದ್ರಗಳಲ್ಲಿ ಎರಡು ದಿನಕೊಮ್ಮೆ ತ್ಯಾಜ್ಯ ಸಂಗ್ರಹಿಸಬೇಕು, ಈ ಕುರಿತು ಜಿಲ್ಲಾ ನೋಡಲ್ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ‘2018-–19ನೇ ಸಾಲಿನಲ್ಲಿ ಕಾಯಕಲ್ಪ ಪ್ರಶಸ್ತಿಗೆ ಜಿಲ್ಲೆಯ 12 ಆಸ್ಪತ್ರೆಗಳು ಭಜನವಾಗಿದೆ. ವೈದ್ಯರು ಸಲ್ಲಿಸಿರುವ ಉತ್ತಮ ಸೇವೆಯೆ ಇದಕ್ಕೆ ಕಾರಣ’ ಎಂದು ಸಂತಸ ವ್ಯಕ್ತಪಡಿಸಿದರು.
‘ರಾಜ್ಯ ಮಟ್ಟದಲ್ಲಿ ಬೇತಮಂಗಲ ಆಸ್ಪತ್ರೆ 2ನೇ ಸ್ಥಾನ, ಬಂಗಾರಪೇಟೆ 4ನೇ ಸ್ಥಾನ, ಅಣ್ಣಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಉತ್ತಮ ಆಸ್ಪತ್ರೆ ಪ್ರಶಂಸೆಗೆ ಪಾತ್ರವಾಗಿದೆ’ ಎಂದು ವಿವರಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ಭಾರತಿ, ಡಾ.ಮಂಜುನಾಥ್, ನಗರಸಭೆ ಪ್ರಭಾರ ಪೌರಾಯುಕ್ತ ಶಿವಪ್ರಕಾಶ್, ಮೀರಾ ಏಜೆನ್ಸಿಯ ಮುಖ್ಯಸ್ಥ ವೆಂಕಟರಾಮರೆಡ್ಡಿ ಹಾಜರಿದ್ದರು.