ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ಅಮಾನಿಕೆರೆ ಸಮೀಪ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಲಾಗಿರುವ ನಿವೇಶನದಲ್ಲಿ ನೆಡಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರವಿದ್ದ ಕಲ್ಲಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಕಾರ್ಯರ್ತರು ಬುಧವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆನಡೆಸಿದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಸದಸ್ಯ ಆರ್.ಜಿ.ನರಸಿಂಹಯ್ಯ ಮಾತನಾಡಿ, ‘ಅಮಾನಿಕೆರೆ ಅಂಗಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು 2 ಎಕರೆ ಜಮೀನು ಮೀಸಲಿಡಲಾಗಿದೆ. ಆ ಜಮೀನಲ್ಲಿ ನೆಡಲಾಗಿದ್ದ ಅಂಬೇಡ್ಕರ್ ಭಾವ ಚಿತ್ರವುಳ್ಳ ಕಲ್ಲನ್ನು ಉರುಳಿಸಿರುವುದು ಹೇಯಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ನಾರಾಯಣಸ್ವಾಮಿ ಮಾತನಾಡಿ, ‘ಸರ್ವೆ ನಂಬರ್ 49 ರಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರ ಮಂಜೂರು ಮಾಡಿರುವ 2 ಎಕರೆ ಜಮೀನಿನಲ್ಲಿ ಕೆಲವರು ವಾಸಿಸುತ್ತಿದ್ದಾರೆ. ತಾಲ್ಲೂಕು ಆಡಳಿತ ಅವರನ್ನು ತೆರವುಗೊಳಿಸಿ ನಿವೇಶನದ ಸುತ್ತ ಕಾಂಪೌಂಡ್ ಹಾಕಬೇಕು’ ಎಂದು ಆಗ್ರಹಿಸಿದರು.
ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಸಿ.ನಾರಾಯಣಸ್ವಾಮಿ, ರೆಡ್ಡಪ್ಪ, ಗಾಂಡ್ಲಹಳ್ಳಿ ನಾರಾಯಣಸ್ವಾಮಿ, ಬಂಗವಾದಿ ನಾಗರಾಜ್, ವಾಸು, ನಾರಾಯಣಸ್ವಾಮಿ, ಹೊದಲಿ ನಾರಾಯಣಸ್ವಾಮಿ, ಚಂದ್ರ ಇದ್ದರು.