ಕೋಲಾರ: ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಮಧ್ಯೆ ಹಾಕಿದ್ದ ತಿಪ್ಪೆ ಗುಂಡಿಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ತೆರವುಗೊಳಿಸಲಾಯಿತು.
ಗ್ರಾಮದ ಮಧ್ಯೆ ಕೆಲವರು ನಿಯಮಬಾಹಿರವಾಗಿ ತಿಪ್ಪೆ ಹಾಕಿದ್ದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿತ್ತು. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು. ಅಧಿಕಾರಿಗಳು ತಿಪ್ಪೆ ತೆರವುಗೊಳಿಸುವಂತೆ ಹಲವಾರು ಬಾರಿ ಸೂಚನೆ ನೀಡಿದರು ತೆರವು ಮಾಡಿರಲಿಲ್ಲ.
ಹೀಗಾಗಿ ಗ್ರಾ.ಪಂ ಆಡಳಿತಾಧಿಕಾರಿ ಎ.ಬಿ.ರಾಮಕೃಷ್ಣ ಹಾಗೂ ಪಿಡಿಒ ಕೆ.ಅನುರಾಧಾ ಅವರ ನೇತೃತ್ವದಲ್ಲಿ ಜೆಸಿಬಿ ಬಳಸಿ ತಿಪ್ಪೆಗಳನ್ನು ತೆರವು ಮಾಡಲಾಯಿತು. ಬಳಿಕ ತಿಪ್ಪೆಗಳ ಗೊಬ್ಬರವನ್ನು ಗ್ರಾಮದ ಹೊರಗೆ ಸಾಗಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
‘ಗ್ರಾಮದ ಮಧ್ಯೆ ತಿಪ್ಪೆಗಳನ್ನು ಹಾಕಿದ್ದರಿಂದ ಸೊಳ್ಳೆ ಕಾಟ ಹೆಚ್ಚಿತ್ತು. ತಿಪ್ಪೆಯ ವಾಸನೆಯಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗಿತ್ತು. ಅಲ್ಲದೇ, ಸಾಂಕ್ರಾಮಿಕ ರೋಗ ಎದುರಾಗಿತ್ತು. ಈ ಕಾರಣಕ್ಕೆ ತಿಪ್ಪೆಗಳನ್ನು ತೆರವುಗೊಳಿಸಲಾಯಿತು’ ಎಂದು ರಾಮಕೃಷ್ಣಪ್ಪ ತಿಳಿಸಿದರು.
‘ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ತಿಪ್ಪೆಗಳನ್ನು ತೆರವು ಮಾಡಲಾಗಿದೆ. ಪರಿಸರ ಮಾಲಿನ್ಯ ತಡೆಗೆ ಸಾರ್ವಜನಿಕರು ಗ್ರಾ.ಪಂ ಜತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಗ್ರಾ.ಪಂ ಕಾರ್ಯದರ್ಶಿ ಪ್ರಮೀಳಾ, ಪ್ರಥಮ ದರ್ಜೆ ಸಹಾಯಕ ನಾಗರಾಜ, ಸಿಬ್ಬಂದಿ ಹಾಜರಿದ್ದರು.