ಕೋಲಾರ: ‘ಶೈಕ್ಷಣಿಕ ಸಾಧನೆಯಲ್ಲಿ ಹಿನ್ನಡೆಯಾಗಿರುವ ಸರ್ಕಾರಿ ಕಾಲೇಜುಗಳಲ್ಲಿನ ವ್ಯವಸ್ಥೆ ಬದಲಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೂನಿಯರ್ ಕಾಲೇಜುಗಳಲ್ಲಿನ ಪ್ರೌಢ ಶಾಲಾ ವಿಭಾಗದ ಶೈಕ್ಷಣಿಕ ಸಾಧನೆ ಸಮಾಧಾನತಂದಿಲ್ಲ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಅಯಾ ಶಾಲಾ ಉಪ ಪ್ರಾಂಶುಪಾಲರು ವರದಿ ಸಲ್ಲಿಸಲು ಸೂಚಿಸಲಾಗಿದೆ’ ಎಂದರು.
‘ತರಗತಿ ಕೊಠಡಿಗಳ ಸಮಸ್ಯೆಯೇ ಪಾಳಿಯ ವ್ಯವಸ್ಥೆಗೆ ಕಾರಣವಾಗಿದ್ದು, ಇದು ಶೈಕ್ಷಣಿಕ ಅಭಿವೃದ್ದಿಗೆ ಅಡ್ಡಿಯಾಗಿದೆ. ಈ ಸಂಬಂಧ ಆಯುಕ್ತರು ಮತ್ತು ಸರ್ಕಾರದೊಂದಿಗೆ ಚರ್ಚಿಸಿ ಕೊಠಡಿಗಳನ್ನು ಹೆಚ್ಚಿಸಿ ಪಾಳಿಯ ವ್ಯವಸ್ಥೆಗೆ ಕೊನೆಯಾಡಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಜೂ.21ರಿಂದ ಆರಂಭಗೊಳ್ಳಲಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯಾ ವಿಷಯ ಶಿಕ್ಷಕರಿಂದ ಕನಿಷ್ಟ ಉತೀರ್ಣರಾಗಲು ಮಾರ್ಗದರ್ಶನ ಕೊಡಿಸಿ. ರಜೆ ಅವಧಿಯಲ್ಲಿ ತರಗತಿ ನಡೆಸಬೇಕು’ ಎಂದು ಚೂಸಿದರು.
‘ಜೂನಿಯರ್ ಕಾಲೇಜುಗಳಲ್ಲಿ ಪಿಯುಸಿ ಹಾಗೂ ಪ್ರೌಢಶಾಲಾ ತರಗತಿಗಳು ಪಾಳಿಯ ವ್ಯವಸ್ಥೆಯಲ್ಲಿ ನಡೆಯುತ್ತಿವೆ, ಇದರಿಂದ ಪ್ರೌಢಶಾಲಾ ಮಕ್ಕಳಲ್ಲಿ ಶಿಸ್ತಿನ ಕೊರತೆಗೂ ಕಾರಣವಾಗುತ್ತಿದೆ. ಜತೆಗೆ ಮಧ್ಯಾಹ್ನದನಂತರ ತರಗತಿಗಳು ನಡೆಯುವಂತಾಗಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜ್ ಗೌಡ ನಿರ್ದೇಶಕರಿಗೆ ಮಾಹಿತಿ ನೀಡಿದರು.
‘ಜಿಲ್ಲೆಯ ಒಟ್ಟಾರೆ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಜೂನಿಯರ್ ಕಾಲೇಜುಗಳ ಫಲಿತಾಂಶ ಪರಿಣಾಮ ಬೀರುತ್ತಿದೆ. ಅಲ್ಲಿ ಶಿಕ್ಷಕರು ಎಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅಧಿಕಾರಿಗಳು ಶಾಲೆ ದತ್ತು ಪಡೆದು ಉಸ್ತುವಾರಿ ವಹಿಸುತ್ತಿದ್ದರೂ ಫಲಿತಾಂಶ ಹೆಚ್ಚಿಸುವಲ್ಲಿ ಸಾಧ್ಯವಾಗುತ್ತಿಲ್ಲ’ ಎಂದರು.
ಮಂಡಳಿ ಸಹಾಯಕ ನಿರ್ದೇಶಕ ಮ್ಯಾಗಿ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಬಾಲಾಜಿ, ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಹಾಜರಿದ್ದರು.