ಮಾಲೂರು: ಸರ್ಕಾರಿ ಜಮೀನಿನ ಕಡತಗಳ ನಕಲಿ ದಾಖಲೆ ಸೃಷ್ಟಿಸಿ ಹಗಲು ದರೋಡೆ ಮಾಡುತ್ತಿರುವ ಭೂಮಾಫಿಯಾ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸೀತನಾಯಕನಹಳ್ಳಿ ಗ್ರಾಮಸ್ಥರು ಶನಿವಾರ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ಜಿ.ಪಂ ಮಾಜಿ ಸದಸ್ಯ ಪಿ.ನಾರಾಯಣಸ್ವಾಮಿ ಮಾತನಾಡಿ, ‘ತಾಲ್ಲೂಕಿನ ಸರ್ವೇ ನಂಬರ್ 24ರಲ್ಲಿ ಸೀತನಾಯಕನಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿಗೆ 3.30 ಎಕರೆ, ಎಚ್.ಹೊಸ ಕೋಟೆ ಗ್ರಾಮದ ವೆಂಕಟರಮಣರೆಡ್ಡಿಗೆ 3.35 ಎಕರೆ, ಚೌಡರೆಡ್ಡಿಗೆ 2.25 ಎಕರೆ, ಹಾಗೂ ಮುನಿಗಾ ಎಂಬುವರಿಗೆ 4.30 ಎಕರೆ, ಒಟ್ಟು 14.30 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಭೂ ಮಾಫಿಯಾಗಳು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ಮಾಡಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು. ಭೂಗಳ್ಳರಿಗೆ ಮತ್ತು ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಬಗರ್ ಹುಕುಂ ಸಕ್ರಮ ಸಮಿತಿಯ ಸದಸ್ಯ ಅಂಬರೀಷ್ ರೆಡ್ಡಿ, ಗ್ರಾಮಸ್ಥರಾದ ಎಂ.ಶ್ರೀನಿವಾಸ್ ರೆಡ್ಡಿ, ಪ್ರಕಾಶ್ ರೆಡ್ಡಿ,ಮುನಿರೆಡ್ಡಿ, ಚಿನ್ನಮ್ಮ, ಮುನಿಯಪ್ಪ, ಶಾಂತಮ್ಮ, ಸುಮಿತ್ರಮ್ಮ, ರಾಮಸ್ವಾಮಿರೆಡ್ಡಿ, ಶಫೀ ಹುಲ್ಲಾ ಖಾನ್, ಶ್ರೀದೇವಿ ಮಂಜುನಾಥ್, ವೇಣು, ಪಿಳ್ಳಪ್ಪ, ನವೀನ್, ಲವಕುಶ, ಚಲಪತಿ ಇದ್ದರು.