ಕೋಲಾರ: ಮರಾಠ ಅಭಿವೃದ್ಧಿ ನಿಗಮ ರಚಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ. ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು.
ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷ ಶೆಟ್ಟಿಹಳ್ಳಿ ರಮೇಶ್ ಮಾತನಾಡಿ, ಮರಾಠಿಗರನ್ನು ಓಲೈಸಿಕೊಳ್ಳಲು ಹಾಗೂ ಅವರ ಮತ ಬೇಟೆಗಾಗಿ ರಾಜ್ಯ ಸರ್ಕಾರ ನಿಗಮ ಸ್ಥಾಪನೆಗೆ ಮುಂದಾಗಿರುವುದು ಖಂಡನೀಯ ಎಂದರು.
ನಿಗಮ ರಚನೆ ನಿರ್ಧಾರದ ಬಗ್ಗೆ ರಾಜ್ಯದಲ್ಲಿರುವ ಮರಾಠಿಗರು ಸ್ವಾಗತಿಸಿಲ್ಲ. ಸರ್ಕಾರ ಮರಾಠಿಗರ ಹಲವಾರು ಬೇಡಿಕೆಗಳನ್ನು ಈಡೇರಿಸಿರುವಾಗ ನಿಗಮದ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ನಿಗಮಕ್ಕೆ ಸರ್ಕಾರ ಮೀಸಲಿಟ್ಟಿರುವ ₹ 50 ಕೋಟಿಯನ್ನು ಕಷ್ಟದಲ್ಲಿರುವ ರೈತರಿಗೆ, ಪ್ರವಾಹದಿಂದ ನೊಂದವರಿಗೆ, ಕೋವಿಡ್ ಪೀಡಿತರಿಗೆ ಪರಿಹಾರವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷರಾದ ರಾಜೇಶ್, ಜನ್ನಘಟ್ಟ ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಲ್ಲಂಬಳ್ಳಿ ಶಿವು, ಕಾರ್ಯದರ್ಶಿ ಚಲಪತಿ, ಜಿಲ್ಲಾ ಯುವ ಘಟಕದ ಮನೋಜ್ ಕುಮಾರ್, ತಾಲ್ಲೂಕು ಅಧ್ಯಕ್ಷ ರಾಜೇಶ್ ಹಾಜರಿದ್ದರು.