ಕೋಲಾರ: ‘ವಿದ್ಯಾರ್ಥಿಗಳು ಸಾಮಾಜಿಕ ವಲಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯ ಚಟುವಟಿಕೆಯಲ್ಲಿ ಬದ್ಧತೆ ಪ್ರದರ್ಶಿಸಬೇಕು’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸ್ಥಾನಿಕ ಆಯುಕ್ತ ಡಾ.ಡಿ.ಕೆ.ರಮೇಶ್ ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಗರದಲ್ಲಿ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿ, ‘ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬಗ್ಗೆ ಅರಿವು ಪಡೆದುಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಸೇವಾ ಮನೋಭಾವನೆ ಮತ್ತು ಸಾಧಿಸುವ ಛಲವನ್ನು ಬಾಲ್ಯದಿಂದಲೆ ಬೆಳೆಸಬೇಕು. ಕಲಿಕೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರಬಾರದು. ಪರಿಸರದ ಬಗ್ಗೆ ತರಗತಿಯಲ್ಲಿ ಕಲಿಯುವುದಕ್ಕಿಂತ ನಿಸರ್ಗದ ಮಧ್ಯೆ ಇದ್ದು ಕಲಿಯಬೇಕು. ಸಂಸ್ಥೆಯ ಶಿಬಿರಗಳಲ್ಲಿ ಭಾಗವಹಿಸಿ ಮೂಲಕ ಪರಿಸರ ಸಂರಕ್ಷಣೆ, ಪ್ರಾಣಿಗಳ ರಕ್ಷಣೆ ಕುರಿತು ಅರಿವು ಹೆಚ್ಚಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಂಸ್ಥೆಯ ಜಿಲ್ಲಾ ಆಯುಕ್ತರ ಕೆ.ಆರ್.ಸುರೇಶ್ ಮಾತನಾಡಿ, ‘ಇಂಗ್ಲೇಡಿನಲ್ಲಿ ೧೯೦೭ರಲ್ಲಿ ೨೦ ಮಕ್ಕಳೊಂದಿಗೆ ಇಂಗ್ಲೇಂಡಿನಲ್ಲಿ ಪ್ರಾರಂಭವಾದ ಶಾಖೆ ಈಗ ೨೫೦ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಲಾರ್ಡ್ ಬೇಡನ್ ಪಾವೆಲ್ ಬ್ರಿಟನ್ ಸೇನಾಧಿಕಾರಿಯಾಗಿ ಉನ್ನತ ಸ್ಥಾನ ಪಡೆದರೂ ನಿವೃತ್ತಿಯ ನಂತರ ಜಗತ್ತಿನ ಕಲ್ಯಾಣಕ್ಕಾಗಿ, ಸೇವಾಮನೋಭಾವದಿಂದ ಸ್ಥಾಪಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ದಿಂದಾಗಿ ಅವರ ಹೆಸರು ಶಾಶ್ವತವಾಗಿ ಉಳಿದಿದೆ’ ಎಂದು ವಿವರಿಸಿದರು.
ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಂಘಟಕ ವಿಶ್ವನಾಥ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಆರ್.ಮಧು, ಪೋಷಕರಾದ ರಾಜಣ್ಣ, ರಾಜಗೋಪಾಲ್ ಹಾಜರಿದ್ದರು.