ಕೋಲಾರ: ‘ಯೋಗದಿಂದ ಉತ್ತಮ ಆರೋಗ್ಯದ ಜತೆಗೆ ಮಾನಸಿಕವಾಗಿ ನೆಮ್ಮದಿ, ರಕ್ತದೊತ್ತಡ ಕಡಿಮೆಯಾಗಿ ಉತ್ತಮ ಒಡನಾಟಕ್ಕೆ ಕಾರಣವಾಗುತ್ತದೆ’ ಎಂದು ಉಪನ್ಯಾಸಕ ರಮೇಶ್ಕುಮಾರ್ ತಿಳಿಸಿದರು.
ನಗರದ ಮಹರ್ಷಿ ಯೋಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೪ನೇ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಪ್ರತಿಯೊಬ್ಬರೂ ದಿನದ ಅರ್ಧಗಂಟೆ ಯೋಗ ಮಾಡಲು ಸಮಯ ಮೀಸಲಿಟ್ಟರೆ ಹೆಚ್ಚು ಸಹಕಾರಿಯಾಗಿದ್ದು, ಆರೋಗ್ಯ ವೃದ್ಧಿಗೊಳಿಸಿಕೊಳ್ಳಬಹುದು’ ಎಂದರು.
‘ಬದಲಾದ ಆಹಾರ ಪದ್ದತಿ ಮತ್ತು ಮನುಷ್ಯದ ಜೀವನ ಪದ್ದತಿಯಿಂದ ಇಂದು ಬೊಜ್ಜು ಮತ್ತಿತರ ಮಾರಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಸಕ್ಕರೆ ಕಾಯಿಲೆಯಂತು ಮಿತಿ ಮೀರುತ್ತಿದೆ, ರಕ್ತದೊತ್ತಡದಿಂದ ಕೋಪ ಹೆಚ್ಚಾಗಿ ಸಮಾಜದಲ್ಲಿ ಪರಸ್ಪರ ಸಂವಹನದಲ್ಲಿ ಆಕ್ರೋಶ, ದ್ವೇಷ, ಅಸೂಯೆ ಹೆಚ್ಚಲು ಕಾರಣವಾಗಿದೆ’ ಎಂದು ವಿಷಾದಿಸಿದರು.
ಮುಖ್ಯ ಯೋಗ ಶಿಕ್ಷಕ ಜಯಪ್ರಕಾಶ್ ಮಾತನಾಡಿ, ‘ವಿವೇಕಾನಂದರು ಸೇರಿದಂತೆ ಹಲವಾರು ಸಾಧು ಸಂತರು ಯೋಗ ಸಾಧಕರಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ನಿರಂತರ ಯೋಗಾಭ್ಯಾಸದಿಂದ ಆಸ್ಪತ್ರೆಗಳಲ್ಲಿ ಲಕ್ಷಾಂತರ ಖರ್ಚು ಮಾಡಿದರೂ ನಿವಾರಣೆಯಾಗದ ಅನೇಕ ರೋಗಗಳಿಗೆ ಪರಿಹಾರ ಸಿಕ್ಕಿದೆ, ಡಯಾಬಿಟೀಸ್, ರಕ್ತದೊತ್ತಡ ನಿಯಂತ್ರನದಲ್ಲಿರಲು ಯೋಗ ಸದಾ ಸಹಕಾರಿ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಮತ್ತು ಶಂಕರಮೂರ್ತಿ ತಂಡದವರಿಂದ ಸುಗಮ ಸಂಗೀತಾ ನಡೆಯಿತು.