ಕೆಜಿಎಫ್: ಪ್ರತಿಯೊಬ್ಬ ಮಹಿಳೆಯು ಆರ್ಥಿಕವಾಗಿ ಸಬಲರಾಗಲು ಪ್ರತಿ ಹಳ್ಳಿಗಳಲ್ಲಿಯೂ ಹಾಲು ಉತ್ಪಾದಕರ ಸಹಕಾರ ಸಂಘ ರಚಿಸಬೇಕು. ಇದರಿಂದಾಗಿ ಸಹಕಾರ ರಂಗ ಬೆಳೆಯಲು ಸಾಧ್ಯವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ರಾಬರ್ಟಸನ್ಪೇಟೆಯಲ್ಲಿ ಬುಧವಾರ ನಡೆದ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋಲಾರ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಕೆಜಿಎಫ್ ತಾಲ್ಲೂಕಿನಲ್ಲಿ ಅವುಗಳ ಸಂಖ್ಯೆ ತೀರಾ ಕಡಿಮೆ ಇದೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿ ಸಂಘ ಸ್ಥಾಪನೆಯಾಗಬೇಕು ಎಂದರು.
ಶಾಸಕಿ ಎಂ. ರೂಪಕಲಾ ಮಾತನಾಡಿ, ಸಹಕಾರ ರಂಗದಿಂದ ಬಡವರ ಜೀವನ ಸುಧಾರಿಸಬಹುದು. ರಾಷ್ಟ್ರೀಕೃತ ಬ್ಯಾಂಕ್ಗಳು ಭದ್ರತೆ ಇಲ್ಲದೆ ಸಾಲ ನೀಡಲು ನಿರಾಕರಿಸಿದಾಗ ಸಹಕಾರ ಕ್ಷೇತ್ರ ಬಡವರ ಪಾಲಿಗೆ ಸಂಜೀವಿನಿಯಾಯಿತು ಎಂದರು.
‘ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಕಟ್ಟಲು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಹಲವಾರು ಸಂಘಗಳು ಈಗ ಸ್ಥಾಪನೆಯ ಹಂತದಲ್ಲಿದೆ’ ಎಂದು ಹಾಲು ಒಕ್ಕೂಟದ ಡಾ.ವೆಂಕಟರಮಣ ತಿಳಿಸಿದರು.
ಸಹಕಾರ ಯೂನಿಯನ್ ನಿರ್ದೇಶಕಿ ಅರುಣಾ, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಉಪಾಧ್ಯಕ್ಷೆ ದೇವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ, ಪಾಪಣ್ಣ ಇದ್ದರು.