ಮುಳಬಾಗಿಲು: ತಾಲ್ಲೂಕಿನ ಆವಣಿ ಗ್ರಾಮದ ಶೃಂಗೇರಿ ಮಠದ ಉತ್ತರಾಧಿಕಾರಿ ಸ್ಥಾನಕ್ಕೆ ಶೃಂಗೇರಿ ಮಠದ ಶ್ರೀಗಳು ಸೂಚಿಸಿದವರನ್ನೇ ನೇಮಿಸಲಾಗುವುದು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ತಿಳಿಸಿದರು.
ತಾಲ್ಲೂಕಿನ ಆವಣಿ ಗ್ರಾಮದಲ್ಲಿ ಗುರುವಾರ ನಡೆದ ಅಭಿನವ ವಿದ್ಯಾಶಂಕರಭಾರತೀ ಸ್ವಾಮೀಜಿಯ ಪ್ರಥಮ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಮಠದ ಅಭಿವೃದ್ಧಿಗೆ ಹನ್ನೊಂದು ಮಂದಿ ಟ್ರಸ್ಟಿಗಳನ್ನು ನೇಮಕ ಮಾಡಲಾಗಿದೆ. ಮಠದ ಕೋಟ್ಯಂತರ ರೂಪಾಯಿ ಆಸ್ತಿಯು ಹಲವಾರು ಕಡೆ ಹಂಚಿಹೋಗಿದೆ. ಅವುಗಳನ್ನು ವಶಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಆವಣಿ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಆಂಧ್ರಪದೇಶದ ಕುಪ್ಪ ನಗರದಲ್ಲಿರುವ 46 ಎಕರೆ ಜಮೀನು ವಶಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಮಠದಲ್ಲಿ ಗೋಶಾಲೆ, ವೇದಪಾಠ ಶಾಲೆ ತೆರೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಮಠದ ಅಧ್ಯಕ್ಷ ಭಾನುಪ್ರಕಾಶ್ ಶರ್ಮ, ಟ್ರಸ್ಟಿಗಳಾದ ಕೃಷ್ಣಮೂರ್ತಿ, ಆವಣಿ ಎಸ್., ವಾಸುದೇವ್, ನಂಜುಂಡಶಾಸ್ತ್ರಿ, ಸೂರ್ಯಪ್ರಸಾದ್, ಅಚ್ಯುತ, ಎ.ಎನ್. ಚಂದ್ರಶೇಖರ್, ಮುಳಬಾಗಿಲು ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಎನ್. ಶ್ರೀನಿವಾಸ್ ಹಾಜರಿದ್ದರು.