ಕೋಲಾರ: ‘ಕೊರೊನಾ ಸೋಂಕಿನ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರಿಗೆ ಶೂನ್ಯಬಡ್ಡಿ ಸಾಲ ನೀಡಿ ಅವರ ಕೈ ಹಿಡಿಯೋಣ. ಉಳ್ಳವರು ಡಿಸಿಸಿ ಬ್ಯಾಂಕ್ನಲ್ಲಿ ಹಣ ಠೇವಣಿಯಿಟ್ಟು ಹೃದಯವಂತಿಕೆ ಮೆರೆಯಿರಿ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮನವಿ ಮಾಡಿದರು.
ತಾಲ್ಲೂಕಿನ ವಕ್ಕಲೇರಿ ಎಸ್ಎಫ್ಸಿಎಸ್ ವ್ಯಾಪ್ತಿಯ ರೈತರಿಗೆ ಇಲ್ಲಿ ಸೋಮವಾರ ₹ 71 ಲಕ್ಷ ಬೆಳೆ ಸಾಲ ವಿತರಿಸಿ ಮಾತನಾಡಿ, ‘ಲಾಕ್ಡೌನ್ ಕಾರಣಕ್ಕೆ ರೈತರ ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗಲಿಲ್ಲ. ಈಗ ಹೊಸದಾಗಿ ಬೆಳೆ ಮಾಡಲು ಹಣವಿಲ್ಲದ ಕಾರಣ ರೈತರು ಬಡ್ಡಿ ದಂಧೆಕೋರರ ಸುಳಿಗೆ ಸಿಲುಕುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ವಾಣಿಜ್ಯ ಬ್ಯಾಂಕ್ಗಳಲ್ಲಿ ಇಟ್ಟಿರುವ ಠೇವಣಿ ತೆಗೆದು ಡಿಸಿಸಿ ಬ್ಯಾಂಕ್ನಲ್ಲಿ ಇಟ್ಟು ಹೆಚ್ಚಿನ ಬಡ್ಡಿ ಪಡೆಯುವುದರ ಜತೆಗೆ ರೈತರಿಗೆ ಬೆಳೆ ಸಾಲ ನೀಡಲು ನೆರವಾಗಬೇಕು. ವಾಣಿಜ್ಯ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ದೇಶ ಬಿಟ್ಟು ಹೋಗಿರುವ ಉದ್ಯಮಿಗಳು ಕಣ್ಣ ಮುಂದೆ ಇದ್ದಾರೆ. ಆದರೆ, ರೈತರು ಮೋಸಗಾರರಲ್ಲ. ಪ್ರಾಮಾಣಿಕತೆಯಿಂದ ಸಾಲ ಮರುಪಾವತಿಸುತ್ತಾರೆ’ ಎಂದರು.
‘ರೈತರ ಸಂಕಷ್ಟ ಪರಿಹಾರಕ್ಕೆ ಬ್ಯಾಂಕ್ ಶಕ್ತಿ ಮೀರಿ ಶ್ರಮಿಸುತ್ತಿದೆ. ಪ್ರತಿ ರೈತನಿಗೂ ಶೂನ್ಯ ಬಡ್ಡಿ ಸಾಲ ಸಿಗಬೇಕು. ಠೇವಣಿ ಪ್ರಮಾಣ ಹೆಚ್ಚಿದಷ್ಟು ಅತಿ ಹೆಚ್ಚು ರೈತರಿಗೆ ಬೆಳೆ ಸಾಲ ನೀಡುವ ಶಕ್ತಿ ಬ್ಯಾಂಕ್ಗೆ ಬರುತ್ತದೆ. ಜತೆಗೆ ನಬಾರ್ಡ್ನಿಂದ ಹೆಚ್ಚಿನ ಹಣಕಾಸು ನೆರವು ಸಿಗಲಿದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ಕುಮಾರ್ ವಿವರಿಸಿದರು.
ಬ್ಯಾಂಕ್ನ ಗುರಿ: ‘ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ನಂಬರ್ 1 ಬ್ಯಾಂಕ್ ಆಗಿದೆ. ಬ್ಯಾಂಕ್ ಮಹಿಳಾ ಸಂಘಗಳಿಗೆ ನೀಡಿದಷ್ಟು ಸಾಲವನ್ನು ರಾಜ್ಯದ ಇತರೆ ಯಾವುದೇ ಡಿಸಿಸಿ ಬ್ಯಾಂಕ್ ನೀಡಿಲ್ಲ. ಅವಿಭಜಿತ ಕೋಲಾರ ಜಿಲ್ಲೆಯ ರೈತರ ಹಿತ ಕಾಯುವುದು ಬ್ಯಾಂಕ್ನ ಗುರಿ’ ಎಂದು ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಹೇಳಿದರು.
‘ದೇಶಕ್ಕೆ ಅನ್ನ ನೀಡುವ ರೈತರು ಬಡ್ಡಿ ದಂಧೆಗೆ ಸಿಲುಕಬಾರದು. ಈ ಕಾರಣಕ್ಕಾಗಿ ಡಿಸಿಸಿ ಬ್ಯಾಂಕ್ ಪ್ರತಿ ರೈತರಿಗೂ ಬೆಳೆ ಸಾಲ ನೀಡುವ ಸಂಕಲ್ಪ ಮಾಡಿದೆ. ಯಾವುದೇ ವಾಣಿಜ್ಯ ಬ್ಯಾಂಕ್ ಶೂನ್ಯ ಬಡ್ಡಿ ಸಾಲ ನೀಡುವುದಿಲ್ಲ’ ಎಂದು ಬ್ಯಾಂಕ್ ನಿರ್ದೇಶಕ ಸೋಮಣ್ಣ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ವ್ಯವಸ್ಥಾಪಕ ಅಂಬರೀಷ್, ವಕ್ಕಲೇರಿ ಎಸ್ಎಫ್ಸಿಎಸ್ ಉಪಾಧ್ಯಕ್ಷ ಸದಾಶಿವ, ನಿರ್ದೇಶಕರಾದ ಚಂದ್ರೇಗೌಡ, ವೆಂಕಟಮುನಿಯಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.