ಮಾಲೂರು: ಪಟ್ಟಣದ 2ನೇ ವಾರ್ಡ್ನ ನಾಗರಿಕರು ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ವಚ್ಛತೆ... ಹೀಗೆ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಪಟ್ಟಣದ 27 ವಾರ್ಡ್ಗಳ ಪೈಕಿ 2ನೇ ವಾರ್ಡ್ನಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. 1,600 ಮತದಾರರನ್ನು ಹೊಂದಿರುವ ಈ ವಾರ್ಡ್ನಲ್ಲಿ ಬಹುತೇಕರು ಕಾರ್ಮಿಕರೇ ವಾಸವಾಗಿದ್ದಾರೆ. ಇಲ್ಲಿನ ನಾಗರಿಕರಿಗೆ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ.
15 ದಿನಗಳಿಗೊಮ್ಮೆ ಕುಡಿಯುವ ನೀರು: ಇಲ್ಲಿನ ಇಪುರಸಭೆ ವತಿಯಿಂದ 15 ದಿನಗಳಿಗೊಮ್ಮೆ ನಳದ ಮೂಲಕ ಅರ್ಧಗಂಟೆ ಕಾಲ ಮಾತ್ರ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಉಳಿದ ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಖರೀದಿಸುವ ಸ್ಥಿತಿ ಇಲ್ಲಿನ ನಾಗರಿಕರದ್ದು.
2ನೇ ವಾರ್ಡ್ನಲ್ಲಿ ಬೀದಿದೀಪಗಳ ಸೌರ್ಕಯವೇ ಇಲ್ಲದಂತಾಗಿದೆ. ರಸ್ತೆಬದಿಯ ವಿದ್ಯುತ್ ಕಂಬಗಳಲ್ಲಿ ಓಬೀರಾಯನ ಕಾಲದಲ್ಲಿ ಹಾಕಿರುವ ಹಳೇ ವಿದ್ಯುತ್ ದೀಪಗಳು ಕಾಣಿಸುತ್ತವೆ. ಅವು ಹತ್ತಿ ಉರಿದು ಹತ್ತಾರು ತಿಂಗಳುಗಳೇ ಕಳೆದಿದ್ದು, ಅಸ್ಥಿಪಂಜರದಂತೆ ಕಂಬಗಳಲ್ಲಿ ನೇತಾಡುತ್ತಿವೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ವಾರ್ಡ್ ಪೂರ್ತಿ ಎಲ್ಲಿ ನೋಡಿದರತ್ತ ಕಸದ ರಾಶಿಯೇ ಕಾಣುತ್ತದೆ.
ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಹಾಕಿರುವುದರಿಂದ ನೊಣ ಮತ್ತು ಸೊಳ್ಳೆ ಕಾಟ ಹೆಚ್ಚಾಗಿದೆ. ಮನೆಗಳ ಬಳಿಯ ಖಾಲಿ ನಿವೇಶನಗಳಲ್ಲಿ ಆಳುದ್ದದ ಗಿಡಗೆಂಟೆಗಳು ಬೆಳೆದು ಹಾವುಗಳ ಕಾಟ ಹೆಚ್ಚಾಗಿದೆ. ವಾರಕ್ಕೋ ಅಥವಾ 15 ದಿನಗಳಿಗೊಮ್ಮೆ ಪುರಸಭೆಯಿಂದ ಕಸದ ವಾಹನ ವಾರ್ಡಿಗೆ ಬರುತ್ತೆ. ಆಗ ಮುಖ್ಯ ರಸ್ತೆಯಲ್ಲಿರುವ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ.
ಉಳಿದಂತೆ ವಾರ್ಡಿನ ಉಳಿದ ರಸ್ತೆಗಳಲ್ಲಿ ತಿಂಗಳುಗಳು ಕಳೆದರೂ ಕಸ ವಿಲೇವಾರಿ ಆಗದೆ ಇರುವುದರಿಂದ ಕೊಳೆತು ನಾರುತ್ತಿದೆ. ಇದರಿಂದ ನಾಗರಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
ಹೈಟೆನ್ಷನ್ ವಿದ್ಯುತ್ ತಂತಿ: ಆಂಧ್ರದ ಕಡಪದಿಂದ ಮಾಲೂರು ಮಾರ್ಗವಾಗಿ ಪಟ್ಟಣದ 2ನೇವಾರ್ಡಿನಲ್ಲಿ ಹಾದು ಹೋಗಿರುವ 220 ಕೆವಿ ಹೈಟೆನ್ಷನ್ ವಿದ್ಯುತ್ ತಂತಿ ಬೆಂಗಳೂರಿನ ಹೂಡಿ ಕಡೆಗೆ ಹಾದು ಹೋಗಿದೆ. ಈ ಹೈಟೆನ್ಷನ್ ವಿದ್ಯುತ್ ತಂತಿಗಳ ಕೆಳಗಡೆ ಮುಖ್ಯರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದ ಈ ರಸ್ತೆಯಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ.
ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಪಕ್ಕದಲ್ಲಿರುವ ಮನೆಗಳ ಮೇಲೆ ಸೀರಿಯಲ್ ಬಲ್ಬ್ಗಳನ್ನು ಅಳವಡಿಸಿದರೆ ಯಾವುದೇ ವಿದ್ಯತ್ ಸಂಪರ್ಕ ಇಲ್ಲದೇ ಬೆಳಗುತ್ತವೆ. ಹೈಟೆನ್ಷನ್ ತಂತಿ ಹಾದು ಹೋಗಿರುವ ರಸ್ತೆಯಲ್ಲಿ ನಿಂತು ಒಬ್ಬರನ್ನು ಒಬ್ಬರು ಸ್ಪರ್ಶಿಸಿದರೆ ಸಾಕು ವಿದ್ಯುತ್ ಶಾಕ್ ಹೊಡೆದಂತಾಗುತ್ತದೆ. ಇದರಿಂದ ವಾರ್ಡಿನ ಜನತೆಗೆ ಬೆಸ್ಕಾಂ ಇಲಾಖೆ ವತಿಯಿಂದ ಹೈಟೆನ್ಷನ್ ತಂತಿಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.
ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ: ಹೋಂಡಾ ಮೋಟಾರ್ ಕಂಪನಿಯಿಂದ ವಾರ್ಡನಲ್ಲಿ ನಿರ್ಮಾಣ ಮಾಡಿರುವ ಶುದ್ಧ ನೀರಿನ ಘಟಕ ಹಾಳಾಗಿ ತಿಂಗಳುಗಳು ಕಳೆದಿವೆ. ಇದರಿಂದ ಶುದ್ದ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ದುರಸ್ತಿ ಕಾಣದೆ ಇಲ್ಲಿನ ನಾಗರಿಕರು ಖಾಸಗಿ ನೀರು ಟ್ಯಾಂಕರ್ಗಳ ಬಳಿ ಡಬ್ಬಕ್ಕೆ ₹ 10 ನೀಡಿ ಖರೀದಿಸಿ ಕುಡಿಯಬೇಕಾಗಿದೆ.
ಲಭ್ಯವಿಲ್ಲದ ಶೌಚಾಲಯ: ಪುರಸಭೆ ವತಿಯಿಂದ 2016–17ರಲ್ಲಿ ₹ 6.50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶೌಚಾಲಯ ಇಲ್ಲಿಯವರೆಗೂ ಸಾರ್ವಜನಿಕರು ಬಳಕೆಗೆ ದೊರೆತಿಲ್ಲ. ಈ ಕಟ್ಟಡದ ಬಗ್ಗೆ ಪುರಸಭೆಯು ಕಾಳಜಿ ವಹಿಸಿಲ್ಲ. ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೂ ಸಹ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುವುದು ಇಲ್ಲಿನ ನಾಗರಿಕರ ಆರೋಪ.
ವಾರ್ಡ್ನ ಮೂಲಸೌಕರ್ಯಗಳ ಕುರಿತು ಪ್ರತಿಕ್ರಿಯೆ ನೀಡಲು 2ನೇ ವಾರ್ಡಿನ ಪುರಸಭೆ ಸದಸ್ಯ ಜಾಕೀರ್ ಖಾನ್ ಅವರು ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.