ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಸೋಂಕಿತರ ಬದುಕುಲು ಬಿಡಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ ಕಿವಿಮಾತು
Last Updated 25 ಜನವರಿ 2021, 15:58 IST
ಅಕ್ಷರ ಗಾತ್ರ

ಕೋಲಾರ: ಎಚ್‌ಐವಿ ಸೋಂಕಿತರ ಬಗ್ಗೆ ಸಮಾಜದಲ್ಲಿ ಕೀಳು ಭಾವನೆಯಿದೆ. ಅಲ್ಲದೇ, ಅವರನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ವಕೀಲರಿಗೆ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಚ್‍ಐವಿ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಎಚ್‍ಐವಿ ಪೀಡಿತರನ್ನು ಅವಮಾನಿಸಿ ಮಾನಸಿಕ ಹಿಂಸೆಗೆ ಗುರಿಪಡಿಸುವುದು ಕಾನೂನುಬಾಹಿರ. ಎಚ್‌ಐವಿ ಸೋಂಕಿತರು ಸಹ ನಾಗರೀಕರು. ಆದ ಕಾರಣ ಅವರನ್ನು ಕೀಳಾಗಿ ಕಾಣಬಾರದು. ಬದಲಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು. ಅವರು ಅನ್ಯಾಯಕ್ಕೊಳಗಾದರೆ ನ್ಯಾಯಾಕ್ಕಾಗಿ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದು’ ಎಂದರು.

‘ದೇಶದಲ್ಲಿ 1986ರಲ್ಲಿ ಕಾಣಿಸಿಕೊಂಡ ಎಚ್‌ಐವಿ ಸೋಂಕಿಗೆ ಈವರೆಗೂ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಸೋಂಕು ತಡೆಗೆ ಮುನ್ನೆಚ್ಚರಿಕೆಯೇ ಮದ್ದು. ಎಚ್‍ಐವಿ ಸೋಂಕಿತರೊಂದಿಗೆ ಮಾತನಾಡಿದರೆ, ಅವರ ಜತೆ ಕುಳಿತರೆ, ಊಟ ಮಾಡಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಎಚ್‌ಐವಿ ಪೀಡಿತರನ್ನು ಮಾನಸಿಕ ಹಿಂಸೆಗೆ ಗುರಿ ಮಾಡದೆ ಬದುಕಲು ಬಿಡಿ’ ಎಂದು ಕಿವಿಮಾತು ಹೇಳಿದರು.

‘ನಾವು ಎಷ್ಟೇ ಅಭಿವೃದ್ಧಿ ಸಾಧಿಸಿದರೂ, ತಂತ್ರಜ್ಞಾನ ಕಂಡುಹಿಡಿದರೂ ಪ್ರಕೃತಿಯ ವಿರುದ್ಧ ಹೋಗಬಾರದು. ಹಿಂದೆ ಪ್ರಕೃತಿಯನ್ನು ಪೂಜಿಸುವ ಸಂಪ್ರದಾಯವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಕೃತಿ ನಾಶ ಮಾಡುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಸಂಪ್ರದಾಯ, ಆಚಾರ ವಿಚಾರ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಿರುವುದರಿಂದ ಹೊಸ ಹೊಸ ಕಾಯಿಲೆ ಬರುತ್ತಿವೆ. ಮನೆಯ ಆರೋಗ್ಯಕರ ಊಟ ಬಿಟ್ಟು, ರಸ್ತೆ ಬದಿಯ ಆಹಾರ ಮತ್ತು ಕುರುಕಲು ತಿಂಡಿ ಸೇವಿಸುತ್ತಿದ್ದೇವೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ದೇಹವು ರೋಗದ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

ಮಾರಕ ಕಾಯಿಲೆ: ‘ಜಗತ್ತನ್ನು ಅತಿಯಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಏಡ್ಸ್ ಸಹ ಒಂದು. ಎಚ್‌ಐವಿ ಸೋಂಕು ಪೀಡಿತರು ಹಲವು ಸಂಕಟ ಅನುಭವಿಸುತ್ತಿದ್ದಾರೆ. ಎಚ್‍ಐವಿ ಸೋಂಕು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಏಡ್ಸ್‌ ಗುಣಪಡಿಸಲಾಗದ ಮಾರಕ ಕಾಯಿಲೆ. ಆದರೆ, ಎಚ್‌ಐವಿ ಸೋಂಕಿತರ ಜೀವಿತಾವಧಿ ಹೆಚ್ಚಿಸಬಹುದು’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಹೇಳಿದರು.

‘ಅಸುರಕ್ಷಿತ ಲೈಂಗಿಕತೆ, ಎಚ್‌ಐವಿ ಸೋಂಕು ತಗುಲಿರುವ ವ್ಯಕ್ತಿಗಳಿಂದ ರಕ್ತ ಪಡೆಯುವುದು, ಮಾದಕ ವಸ್ತುಗಳ ಸೇವನೆಯಿಂದ ಏಡ್ಸ್‌ ಬರುತ್ತದೆ. ಆದ ಕಾರಣ ದೃಢೀಕೃತ ರಕ್ತ ಕೇಂದ್ರಗಳಿಂದ ಮಾತ್ರ ರಕ್ತ ಪಡೆಯಬೇಕು. ರಕ್ತದಾನ ಮಾಡುವಾಗಲೂ ಎಚ್ಚರ ವಹಿಸಬೇಕು. ಎಚ್‍ಐವಿ ಸೋಂಕು ಹರಡುವ ವಿಧಾನಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಏಡ್ಸ್ ಬಗ್ಗೆ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆ ತೊಡೆದು ಹಾಕಬೇಕು. ಈ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಎಚ್‌ಐವಿ ಸೋಂಕಿತರಿಗೆ ಸರ್ಕಾರದ ಸೌಲಭ್ಯಗಳು ಮತ್ತು ಯೋಜನೆಗಳ ಅರಿವು ಮೂಡಿಸಬೇಕು. ಜತೆಗೆ ಅವರಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸಬೇಕು’ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ವಕೀಲರಾದ ಕೆ.ಆರ್.ಧನರಾಜ್, ರತ್ನಮ್ಮ, ಕೆ.ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT