ಮಾಲೂರು: ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲ. ಎರಡನೇ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಸಂಪೂರ್ಣ ಸಹಕಾರ ಪಡೆದು ಪಟ್ಟಣ ಸೇರಿದಂತೆ ತಾಲ್ಲೂಕು ಅಭಿವೃದ್ಧಿ ಪಥದಲ್ಲಿ ಕೊಂಡಯ್ಯಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶನಿವಾರ ಭೇಟಿ ನೀಡಿ ಮಾತನಾಡಿದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ತಾಲ್ಲೂಕಿನ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಲು ಕೂಡ ಅನುದಾನ ನೀಡಿಲ್ಲ. ಈಗ ಕ್ಷೇತ್ರಕ್ಕೆ ಅಗತ್ಯ ಅನುದಾನ ತರಲಾಗಿದೆ. ಕೈಗಾರಿಕಾ ಲಿಂಕ್ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಆಗಿದೆ. ವಾಹನ ದಟ್ಟಣೆ ತಪ್ಪಿಸಲು 2ಕಿಮೀ ಉದ್ದದ ಪ್ಲೈಓವರ್ ನಿರ್ಮಾಣಕ್ಕೆ ₹290 ಕೋಟಿ ಬಿಡುಗಡೆ ಆಗಿದೆ. ₹15 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ತಾಲ್ಲೂಕಿನ ಬಹುತೇಕ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ₹26 ಕೋಟಿ ಹಣ ಮಂಜೂರು ಮಾಡಲಾಗಿದೆ ಎಂದರು.
ಡಿಎಂಎಫ್( ಡಿಸ್ಟ್ರಿಕ್ಟ್ ಮೈನಿಂಗ್ ಫಂಡ್) ಸುಮಾರು ₹4ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ₹2ಕೋಟಿ ವೆಚ್ಚದಲ್ಲಿ ಮಾಸ್ತಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಮಾಸ್ತಿ ವೆಂಕಟೇಶ್ ಅಯಂಗಾರ್ ರಂಗಮಂದಿರಕ್ಕೆ ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.
ಸ್ವಗ್ರಾಮ ಕೊಮ್ಮನಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಗೊಂಡಿದೆ. ಸ್ವಂತ ಒಂದು ಎಕರೆ ಜಮೀನು ನೀಡುವ ಮೂಲಕ ₹1ಕೋಟಿ ಅನುದಾನದಲ್ಲಿ ನೂತನವಾಗಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಸದಸ್ಯರಾದ ರಾಮಮೂರ್ತಿ, ಆರ್.ವೆಂಕಟೇಶ್, ಎ.ರಾಜಪ್ಪ, ಜಾಕೀರ್ ಖಾನ್, ಇಂತಿಯಾಜ್ ವಿಜಯಲಕ್ಷ್ಮಿ, ಭಾರತಮ್ಮ, ದರಕಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.