ಕೋಲಾರ: ‘ಕಾಶ್ಮೀರ ಉಳಿಸಿ ಎನ್ನುವುದು ತಪ್ಪಲ್ಲ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಹೀಗಾಗಿ ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿಭಟನೆ ವೇಳೆ ನಳಿನಿ ಎಂಬ ಯುವತಿಯು ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿರುವುದು ತಪ್ಪಲ್ಲ’ ಎಂದು ಚಿಂತಕಹಾಗೂ ವಕೀಲ ಸಿ.ಎಸ್.ದ್ವಾರಕನಾಥ್ ಅಭಿಪ್ರಾಯಪಟ್ಟರು.
ಇಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ‘ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದ್ದಲ್ಲ. ಕೇಂದ್ರ ಸರ್ಕಾರವು ಕಾಶ್ಮೀರವನ್ನು ಬಂಧನದಲ್ಲಿ ಇರಿಸಿರುವುದರಿಂದ ನಳಿನಿ ಅವರು ಕಾಶ್ಮೀರವನ್ನು ಬಿಡುಗಡೆ ಮಾಡಿ ಎಂದು ಫಲಕ ಪ್ರದರ್ಶಿಸಿರುವುದು ಸರಿಯಾಗಿಯೇ ಇದೆ’ ಎಂದು ಹೇಳಿದರು.
‘ಕೆಲ ಪಟ್ಟಭದ್ರರು ವಿವಾದ ಸೃಷ್ಟಿಸಿ ನಳಿನಿ ಅವರಿಗೆ ಜಾಮೀನು ಸಿಗದಂತೆ ಸಂಚು ರೂಪಿಸಿದ್ದಾರೆ. ನಳಿನಿ ಪರ ನ್ಯಾಯಾಲಯದಲ್ಲಿ ವಾದ ಮಂಡನೆಗೆ ಸಿದ್ಧತೆ ನಡೆಸಿದ್ದೇವೆ. ನಳಿನಿ ದೇಶದ ಅಸ್ಮಿತೆ. ರಾಜ್ಯ ಮತ್ತು ದೇಶದಲ್ಲಿ ನಮ್ಮ ಅಸ್ಮಿತೆಗೆ ಧಕ್ಕೆ ಬರುವ ಕಾಲಘಟ್ಟದಲ್ಲಿದ್ದೇವೆ. ಅಸ್ಮಿತೆಯ ಉಳಿವಿಗೆ ಹೋರಾಟ ಮಾಡಬೇಕು’ ಎಂದರು.