ಬೇತಮಂಗಲ: ವಿ. ಕೋಟ-ಬೇತಮಂಗಲ ಮುಖ್ಯರಸ್ತೆಯು ಸುಮಾರು ವರ್ಷಗಳಿಂದ ಹದಗೆಟ್ಟಿದೆ. ಇದರಿಂದ ಪ್ರತಿದಿನ ಅಪಘಾತ ಸಂಭವಿಸುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯ ತೋರದೆ ಶೀಘ್ರವೇ ಅಭಿವೃದ್ಧಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಬೇತಮಂಗಲದಿಂದ ವಿ. ಕೋಟಗೆ ಹೋಗುವ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಈ ರಸ್ತೆ ಬಗ್ಗೆ ಯಾವುದೇ ಸ್ಥಳೀಯ ಅಧಿಕಾರಿಯೂ ಗಮಹರಿಸಿಲ್ಲ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ವೈ.ಎಸ್ ಪ್ರವೀಣ್ ಕುಮಾರ್ ಒತ್ತಾಯಿಸಿದರು.
ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದರಿಂದ ರಸ್ತೆಯಲ್ಲಿ ಬಿದ್ದು ಅಪಘಾತಗಳು ನಡೆದು ಪ್ರಕರಣ ದಾಖಲಾಗಿವೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಶಾಸಕರು ಪ್ರತಿ ಬಾರಿಯೂ ಇದೇ ರಸ್ತೆಯಲ್ಲಿಯೇ ಸಂಚಾರ ನಡೆಸುತ್ತಾರೆ. ಅವರಿಗೆ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲು ಮುಂದಾಗಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ದೂರಿದರು.
ರಸ್ತೆ ಕಾಮಗಾರಿ ಬಗ್ಗೆ ಪ್ರತಿಭಟನೆ ಮಾಡಿದ ಕೇವಲ 10 ನಿಮಿಷಗಳಲ್ಲಿ ಇಟಾಚಿ ಯಂತ್ರ ತಂದು ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ. ಪ್ರತಿಭಟನೆಗೆ ಪ್ರತಿಫಲ ದೊರಕಿದೆ ಎಂದು ಅಧ್ಯಕ್ಷರು ತಿಳಿಸಿದರು.
ಪ್ರತಿಭಟನೆಯಲ್ಲಿ ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಕಾರ್ಯದರ್ಶಿ ಸುನಿಲ್ ಕುಮಾರ್, ಮಂಜು ಪಂಡು, ಸುಬ್ರಮಣಿ, ಅನೀಲ್, ಪೂರುಷೋತ್ತಮ್, ನಾರಾಯಣಸ್ವಾಮಿ, ಲೋಕನಾಥ್, ಚನ್ನಕೇಶವ ಪಾಲ್ಗೊಂಡಿದ್ದರು.