ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ಭಯ: ಸೋಂಕಿತ ಪರಾರಿ

ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದ ಸೋಂಕಿತ: ಹುಡುಕಾಟ ಆರಂಭ
Last Updated 6 ಜೂನ್ 2020, 15:56 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬಂಗಾರಪೇಟೆಯಲ್ಲಿನ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಕ್ವಾರಂಟೈನ್‌ಗೆ ಹೆದರಿ ಶನಿವಾರ ಪರಾರಿಯಾಗಿದ್ದು, ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.

ತುಮಕೂರಿನಿಂದ ಇತ್ತೀಚೆಗೆ ಬಂಗಾರಪೇಟೆಗೆ ಬಂದಿದ್ದ ಈ ಸೋಂಕಿತ ವ್ಯಕ್ತಿಯನ್ನು ಆರೋಗ್ಯ ಇಲಾಖೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಅಲ್ಲದೇ, ಅವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಶನಿವಾರ ಪ್ರಯೋಗಾಲಯದ ವರದಿ ಬಂದಿದ್ದು, ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಯು ಸೋಂಕಿತ ವ್ಯಕ್ತಿಯನ್ನು ಫೋನ್‌ನಲ್ಲಿ ಸಂಪರ್ಕಿಸಿ ಸೋಂಕಿನ ಸಂಗತಿ ತಿಳಿಸಿದ್ದಾರೆ. ಆಗ ಈ ವ್ಯಕ್ತಿಯು ತಾನೇ ಆಸ್‍ಪತ್ರೆಗೆ ಬರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿ ಪರಾರಿಯಾಗಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಅವರ ಮೊಬೈಲ್‌ಗೆ ಸಂಜೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿರುವುದು ಗೊತ್ತಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತ ವ್ಯಕ್ತಿ ಪರಾರಿಯಾಗಿರುವ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಸೋಂಕಿತ ವ್ಯಕ್ತಿಯ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೇ, ಅವರ ಜತೆ ನಿರಂತರ ಸಂಪರ್ಕದಲ್ಲಿದ್ದ ಸ್ನೇಹಿತರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹೋಟೆಲ್‌ನಲ್ಲಿ ಕೆಲಸ: ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಸೋಂಕಿತ ವ್ಯಕ್ತಿಯು ಹಿಂದೆ ಬಂಗಾರಪೇಟೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಕಾರಣಕ್ಕೆ ಹೋಟೆಲ್‌ ಬಂದ್ ಆಗಿದ್ದರಿಂದ ಇವರು ಮಾರ್ಚ್‌ನಲ್ಲಿ ತುಮಕೂರು ಜಿಲ್ಲೆಯ ಸ್ವಗ್ರಾಮಕ್ಕೆ ವಾಪಸ್‌ ಹೋಗಿದ್ದರು. ಇತ್ತೀಚೆಗೆ ಲಾಕ್‌ಡೌನ್‌ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಬಂಗಾರಪೇಟೆಯ ಹೋಟೆಲ್‌ಗೆ ಮರಳಿ ಕೆಲಸಕ್ಕೆ ಬರುವುದಾಗಿ ಹೇಳಿದ್ದರು.

ಬಳಿಕ ಹೋಟೆಲ್‌ ಮಾಲೀಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕೊರೊನಾ ಸೋಂಕು ಇಲ್ಲವೆಂಬ ವೈದ್ಯಕೀಯ ವರದಿಯೊಂದಿಗೆ ಕೆಲಸಕ್ಕೆ ಬರುವಂತೆ ಸೂಚಿಸಿ ಕಳುಹಿಸಿದ್ದರು. ಹೀಗಾಗಿ ಈ ವ್ಯಕ್ತಿಯು ಜೂನ್‌ 3ರಂದು ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಇದೀಗ ಈ ವ್ಯಕ್ತಿ ಪರಾರಿಯಾಗಿರುವುದರಿಂದ ಮತ್ತಷ್ಟು ಮಂದಿಗೆ ಸೋಂಕು ಹರಡುವ ಭೀತಿ ಎದುರಾಗಿದೆ.

ತಿರುಪತಿಗೆ ಪಯಣ: ಈ ಸೋಂಕಿತ ವ್ಯಕ್ತಿಯು ಬಂಗಾರಪೇಟೆಗೆ ಬರುವ ಮೊದಲು ಆಂಧ್ರಪ್ರದೇಶದ ತಿರುಪತಿಗೆ ಹೋಗಿ ಬಂದಿರುವುದು ಮೊಬೈಲ್‌ ಕರೆಗಳ ಮಾಹಿತಿಯಿಂದ ಗೊತ್ತಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯು ಬಂಗಾರಪೇಟೆ ಮತ್ತು ತಿರುಪತಿಯಲ್ಲಿ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT