ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಳೆರಾಯನ ಆಟಾಟೋಪಕ್ಕೆ ಅನ್ನದಾತರ ಕಣ್ಣೀರು

ಗಾಳಿ ಮಳೆಗೆ ನೆಲಕಚ್ಚಿದ ತೋಟಗಾರಿಕೆ ಬೆಳೆಗಳು: ರೈತರ ಬದುಕು ಮೂರಾಬಟ್ಟೆ
Last Updated 13 ಮೇ 2022, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ವರುಣ ದೇವನ ಆಟಾಟೋಪಕ್ಕೆ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಕಳೆದ ಕೆಲ ದಿನಗಳಿಂದ ಗಾಳಿ ಸಹಿತ ಸುರಿದ ಮಳೆಯು ಅನ್ನದಾತರಿಗೆ ಕಣ್ಣೀರು ತರಿಸಿದ್ದು, ಸುಮಾರು ₹ 11.53 ಕೋಟಿಯಷ್ಟು ಬೆಳೆ ನಷ್ಟವಾಗಿದೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯ 6 ತಾಲ್ಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿನ ಆರಂಭಕ್ಕೂ ಮುನ್ನವೇ ಅಬ್ಬರಿಸಿ ಬೊಬ್ಬರಿದಿರುವ ಮಳೆಯು ಮಾವು, ಟೊಮೆಟೊ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು, ಸೊಪ್ಪು, ತರಕಾರಿ ಮತ್ತು ಹೂವಿನ ಬೆಳೆಗಳು ಸಹ ನೆಲಕಚ್ಚಿವೆ.

ಬೀನ್ಸ್‌, ಕೋಸು, ಚಿಕಡಿ ಕಾಯಿ, ಕೊತ್ತಂಬರಿ, ಕೋಸು, ಹಸಿರು ಮೆಣಸಿನ ಕಾಯಿ, ಪಪ್ಪಾಯ, ಬಾಳೆ, ಹೂಕೋಸು, ದಪ್ಪ ಮೆಣಸಿನಕಾಯಿ, ಕ್ಯಾರೆಟ್‌, ಹಾಗಲಕಾಯಿಯಂತಹ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ವಿವಿಧೆಡೆ ಹಳೆಯ ಮನೆಗಳು, ವಿದ್ಯುತ್‌ ಕಂಬಗಳು ಉರುಳಿ ಬಿದ್ದು, ಸಾವು ನೋವು ಸಂಭವಿಸಿದೆ.

ಜಿಲ್ಲೆಯಲ್ಲಿ ವಾರದ ಹಿಂದೆಯಷ್ಟೇ ಮಾವು ಕೊಯ್ಲು ಆರಂಭವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯು ಆಘಾತ ನೀಡಿದೆ. ಮುಖ್ಯವಾಗಿ ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕಿನಲ್ಲಿ ಗಾಳಿಯ ತೀವ್ರತೆಗೆ ಮಾವಿನ ಕಾಯಿಗಳು ಉದುರಿವೆ. ಹಲವೆಡೆ ಮಾವಿನ ಮರಗಳೇ ಧರೆಗುರುಳಿವೆ. ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಕಳೆದ 2 ವರ್ಷಗಳಲ್ಲಿ ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಮಾರುಕಟ್ಟೆ ಇಲ್ಲದೆ ಸಂಕಷ್ಟ ಎದುರಿಸಿದ್ದ ಮಾವು ಬೆಳೆಗಾರರು ಈ ಬಾರಿ ಗಾಳಿ ಮಳೆಯಿಂದ ನಷ್ಟ ಅನುಭವಿಸಿದ್ದಾರೆ. 2,464 ಮಂದಿ ಸಣ್ಣ ರೈತರು ಮತ್ತು 133 ಮಂದಿ ಡೊಡ್ಡ ಹಿಡುವಳಿದಾರರು ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ 1,910 ಹೆಕ್ಟೇರ್‌ನಷ್ಟು ಮಾವು ಬೆಳೆ ನಾಶವಾಗಿದೆ. ಸುಮಾರು ₹ 9.53 ಕೋಟಿ ಮಾವು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಬೆಳೆ ಹಾನಿ ವಿವರ: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು 1,640 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಉಳಿದಂತೆ ಕೋಲಾರ ತಾಲ್ಲೂಕಿನಲ್ಲಿ 412.90 ಹೆಕ್ಟೇರ್‌, ಮಾಲೂರು ತಾಲ್ಲೂಕಿನಲ್ಲಿ 6.99 ಹೆಕ್ಟೇರ್‌, ಬಂಗಾರಪೇಟೆ ತಾಲ್ಲೂಕಿನಲ್ಲಿ 59.87 ಹೆಕ್ಟೇರ್‌, ಕೆಜಿಎಫ್‌ ತಾಲ್ಲೂಕಿನಲ್ಲಿ 97.02 ಹೆಕ್ಟೇರ್‌, ಮುಳಬಾಗಿಲು ತಾಲ್ಲೂಕಿನಲ್ಲಿ 108 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ನಷ್ಟದ ಸಮೀಕ್ಷೆ: ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶವಾಗಿರುವ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ರೈತರನ್ನು ಭೇಟಿಯಾಗಿರುವ ಅಧಿಕಾರಿಗಳು ಬೆಳೆಗೆ ಮಾಡಿದ್ದ ಖರ್ಚು ಮತ್ತು ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಬೆಳೆ ನಷ್ಟದ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಮೂರ್ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT