ಬಂಗಾರಪೇಟೆ: ಸಾರ್ವಜನಿಕರ ಅನುಕೂಲಕ್ಕಾಗಿ ಸಂಜಯ್ಗಾಂಧಿ ಬಡಾವಣೆ ಬಳಿ ಪುರಸಭೆ ನಿರ್ಮಿಸಿರುವ ರಾಜೀವ್ ಗಾಂಧಿ ಸಮುದಾಯ ಭವನ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ಅಡ್ಡವಾಗಿದೆ.
ವಿಶೇಷವಾಗಿ ಕೊಳಚೆಪ್ರದೇಶದ ಜನರ ಅನುಕೂಲಕ್ಕೆ ಎಂದು ಸುಮಾರು ದಶಕದ ಹಿಂದೆ ಐಡಿಎಸ್ಎಂಟಿ ಯೋಜನೆಯಡಿ ಈ ಕಟ್ಟಡ ನಿರ್ಮಿಸಲಾಗಿದ್ದು, ಅತಿ ಕಡಿಮೆ ಬಾಡಿಗೆಗೆ ಸಾರ್ವಜನಿಕರ ಕಾರ್ಯಕ್ರಮಗಳಿಗೆ ನೀಡುವ ಉದ್ದೇಶದಿಂದ ಭವನ ನಿರ್ಮಾಣವಾಗಿದ್ದು. ಆದರೆ, ಈಗ ಯಾವ ಕೆಲಸಕ್ಕೂ ಬಳಕೆಯಾಗದಂತಾಗಿದೆ.
ಪ್ರಸ್ತುತ ಭವನದ ಒಳಗೆ ಕಸ, ಅನುಪಯುಕ್ತ ವಸ್ತುಗಳು ತುಂಬಿದೆ. ಹೊರಗಿನ ಕಟ್ಟಡವನ್ನು ಗಿಡಗಂಟಿ, ಬಳ್ಳಿಗಳು ಆವರಿಸಿದೆ. ಭವನದ ಆವರಣದೆಲ್ಲಡೆ ಗಾಜು ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯಲಾಗಿದೆ. ಕೆಲ ಕಿಟಕಿ ಬಾಗಿಲು ಗಾಜುಗಳು ಹೊಡೆದು ಹೋಗಿವೆ. ಲಕ್ಷಗಟ್ಟಲೆ ವೆಚ್ಚದಲ್ಲಿ ಕಟ್ಟಿದ ಭವನ ಈಗ ಯಾವುದಕ್ಕೂ ಬಳಕೆ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.