ಕೋಲಾರ: ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘ, ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸಂಘಗಳಲ್ಲಿ ಉಳಿಕೆಯಾಗಿರುವ ಹಣವನ್ನು ಸೋಸೈಟಿಯಲ್ಲಿ ಠೇವಣಿ ಇಡುವುದಾಗಿ ವಿವಿಧ ಸಂಘಗಳ ಪ್ರತಿನಿಧಿಗಳು ಘೋಷಿಸಿದರು.
‘ನಮ್ಮ ಸಂಘದಲ್ಲಿ ₹ 1 ಲಕ್ಷ ಹಣ ಉಳಿಕೆಯಾಗಿದ್ದು, ಇದನ್ನು ಕಡಗಟ್ಟೂರು ಸೊಸೈಟಿಯಲ್ಲಿ ಠೇವಣಿ ಇಡಲು ಸದಸ್ಯರೆಲ್ಲ ಒಪ್ಪಿಗೆ ನೀಡಿದ್ದಾರೆ. ಸಂಘದ ಸದಸ್ಯರು ಕೇವಲ ಸಾಲ ಪಡೆದುಕೊಳ್ಳಲು ಸಿಮೀತವಾಗಿಲ್ಲ. ಮತ್ತಷ್ಟು ಮಂದಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನಾವೆಲ್ಲ ಡಿಸಿಸಿ ಬ್ಯಾಂಕಿನಲ್ಲೇ ಹಣಕಾಸಿ ವಹಿವಾಟು ನಡೆಸಲಾಗುವುದು’ ಎಂದು ಸಂಘದ ಪ್ರತಿನಿಧಿ ಮಾಲತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ವಿವಿಧ ಗ್ರಾಮಗಳ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಮಧ್ಯ ಪ್ರವೇಶ ಮಾಡಿ, ತಮ್ಮಲ್ಲೂ ಉಳಿಕೆಯಾಗಿರುವ ಹಣ ಸೊಸೈಟಿಯಲ್ಲಿ ಠೇವಣಿ ಇಡಲು ಭರವಸೆ ನೀಡಿದರು.
ಸದಸ್ಯರಿಗೆ ಸಾಲ ಚೆಕ್ ವಿತರಿಸಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ‘ಡಿಸಿಸಿ ಬ್ಯಾಂಕಿನ ಹಿಂದಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಬ್ಯಾಂಕ್ ಅಭಿವೃದ್ಧಿಯ ಪಥದಲ್ಲಿ ಬದಲಾಗಿದೆ. ಸಹಕಾರಿ ಕ್ಷೇತ್ರವೆಂದರೆ ಸುಲಭದ ಮಾತಲ್ಲ. ಅದರಿಂದಲೇ ನಾನು ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಡದಲ್ಲೂ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಬಾಂಕಿನಿಂದ ಸಾಲ ಪಡೆದುಕೊಂಡವರು ವಾಣಿಜ್ಯ ಬ್ಯಾಂಕಿನಲ್ಲಿ ಇಟ್ಟಿರುವ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಬೇಕು’ ಎಂದು ಕೋರಿದರು.
‘ಹೊರಗಡೆಯಿಂದ ಬಂದು ಚುನಾವಣೆಗೆ ನಿಲ್ಲುವ ವ್ಯಕ್ತಿಗಳು ಕೊಡೊ ₨ 1 ಸಾವಿರ, ₨ 2 ಸಾವಿರಕ್ಕೆ ತಲೆಮಾರಿಕೊಳ್ಳಬಾರದು. ಕುರಿ ಕೋಳಿ ಮಾಂಸಕ್ಕೆ ಮತ ಮಾರಿಕೊಳ್ಳಲು ಮುಂದಾಗಬಾರದು. ದುಡ್ಡು ತೆಗೆದುಕೊಂಡು ಮತ ಹಾಕುವ ಪರಿಸ್ಥಿತಿ ಬದಲಾವಣೆಗೆ ಮಹಿಳೆಯರು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ‘ಇದುವರೆಗು ಸೊಸೈಟಿಯಿಂದ ವಿವಿಧ ರೀತಿ ₨ ೨೫ ಕೋಟಿ ಸಾಲ ನೀಡಿದ್ದು ಸಮರ್ಪಕವಾಗಿ ಮರುಪಾವತಿಯಾಗುತ್ತಿದೆ. ಈ ಭಾಗದ ಬಡ ರೈತರ, ಮಹಿಳೆಯರ ಸಬಲೀಕರಣಕ್ಕೆ ಸೊಸೈಟಿಯಿಂದ ಒತ್ತು ನೀಡಲಾಗಿದೆ’ ಎಂದರು.
‘ದೇಶದ ಮಟ್ಟದಲೂ ಡಿಸಿಸಿ ಬ್ಯಾಂಕ್ ಮಾದರಿ ಯೋಜನೆ ರೂಪಿಸಲು ಬೇರೆ ಯಾವ ಬ್ಯಾಂಕಿನಿಂದಲೂ ಸಾಧ್ಯವಿಲ್ಲ. ಗ್ರಾಮೀಣ ಭಾಗದವರಿಗೆ ಬ್ಯಾಂಕ್ ಸೌಲಭ್ಯ ದೊರೆಯುವುದು ಡಿಸಿಸಿಯಿಂದ ಮಾತ್ರ. ಬೇರೆ ಯಾವ ವಾಣಿಜ್ಯ ಬ್ಯಾಂಕ್ ನವರು ಗ್ರಾಮೀಣ ಜನಕ್ಕೆ ಅನುಕೂಲ ಮಾಡುವುದಿಲ್ಲ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್ಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್, ಕಡಗಟ್ಟೂರು ಸಹಕಾರಿ ಸಂಘ ನಿರ್ದೇಶಕರಾದ ವೆಂಕಟೇಶ್, ಕೃಷ್ಣಪ್ಪ, ಎಂಪಿಸಿಎಸ್ನ ನಿರ್ದೇಶಕ ವೆಂಕಟೇಶ್, ಗ್ರಾ.ಪಂ ಸದಸ್ಯರಾದ ಗೋವಿಂದಪ್ಪ, ನಾಗರಾಜ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.