ಬಂಗಾರಪೇಟೆ: ತಾಲ್ಲೂಕಿನ ಕೆರೆಗಳಿಗೆ ಎರಡು ವಾರದ ಒಳಗೆ ಕೆ.ಸಿ.ವ್ಯಾಲಿ ನೀರು ಹರಿಯಲಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಯಲವಳ್ಳಿ ಬಳಿ ಶನಿವಾರ ₹90 ಲಕ್ಷ ವೆಚ್ಚದ ಚೆಕ್ಡ್ಯಾಂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನ ಸಿದ್ದನಹಳ್ಳಿ, ಹೊನ್ನೇನಹಳ್ಳಿ, ಬ್ಯಾಡಬೆಲೆ, ಮಾದ ಮಂಗಲ, ಐನೋರ ಹೊಸಹಳ್ಳಿಯಲ್ಲಿ ಈಗಾಗಲೆ ಚೆಕ್ಡ್ಯಾಂ ನಿರ್ಮಿಸಲಾಗಿದೆ. ತಿಂಗಳ ಒಳಗೆ ಈ ಡ್ಯಾಂಗಳಿಗೆ ನೀರು ಹರಿಯಲಿದೆ ಎಂದರು.
‘ನಾನು ಮತ್ತು ಶ್ರೀನಿವಾಸಪುರ ಶಾಸಕ ರಮೇಶ್ಕುಮಾರ್ ಅವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ, ಕೆ.ಸಿ.ವ್ಯಾಲಿ ಯೋಜನೆ ಮಂಜೂರು ಮಾಡಿಸಿದೆವು. ಕೆಲ ಅಡಚಣೆಗಳಿಂದಾಗಿ ತಾಲ್ಲೂಕಿಗೆ ನೀರು ಹರಿಯುವುದು ತಡವಾಗಿದೆ. ಕೂಡಲೆ ಹರಿಸುವಂತೆ ಒತ್ತಾಯ ಹೇರಲಾಗಿದೆ’ ಎಂದು ಹೇಳಿದರು.
15 ದಿನದೊಳಗೆ ತಾಲ್ಲೂಕಿನ ರೈತ ಮುಖಂಡರೊಂದಿಗೆ ಬಾಗಿನ ಅರ್ಪಿಸಿ, ಕೆ.ಸಿ.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸಲು ಉದ್ದೇಶಿಸಲಾಗಿದೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ, ವೈ.ಎಸ್.ಶ್ರೀನಿವಾಸ್, ಸುರೇಶ್, ರಾಮರೆಡ್ಡಿ, ಶೇಖರ್, ಶ್ರೀಧರ್, ಮಂಜುನಾಥ್, ವೆಂಕಟೇಶ್ಗೌಡ ಇದ್ದರು.