ಕೋಲಾರ: ರಾಜ್ಯ ಬೀಜ ನಿಗಮದ ಚುನಾವಣೆ ಡಿ.6ರಂದು ನಡೆಯಲಿದ್ದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಅವರ ಪರವಾಗಿ ಶಾಸಕ ಕೆ.ಶ್ರೀನಿವಾಸಗೌಡ ಗುರುವಾರ ತಾಲ್ಲೂಕಿನ ವಿವಿಧೆಡೆ ಷೇರುದಾರರ ಮನೆಗಳಿಗೆ ತೆರಳಿ ಮತ ಯಾಚಿಸಿದರು.
ತಾಲ್ಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ಮತ ಯಾಚಿಸಿದ ಶಾಸಕರು, ‘ಬೀಜ ನಿಗಮದ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ 53 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 3,800 ಮತದಾರರ ಸುಮಾರು 10 ಸಾವಿರ ಷೇರು ಮೌಲ್ಯದ ಮತಗಳಿವೆ’ ಎಂದು ತಿಳಿಸಿದರು.
‘ಶೇ 40ರಷ್ಟು ಮತಗಳು ಕೋಲಾರ ತಾಲ್ಲೂಕಿನ ಹುತ್ತೂರು, ವಡಗೂರು, ಹೋಳೂರು ಹೋಬಳಿಗಳ ವ್ಯಾಪ್ತಿಯಲ್ಲಿವೆ. ಮತದಾರರು ಚುನಾವಣೆಯಲ್ಲಿ ಈ ಬಾರಿ ಸೋಮಣ್ಣ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
‘ಬೀಜ ನಿಗಮದ ಚುನಾವಣೆಯಲ್ಲಿ ರೈತರಿಗೆ ಹತ್ತಿರವಾದ ಮತ್ತು ರೈತರಾಗಿರುವ ವ್ಯಕ್ತಿಯ ಆಯ್ಕೆ ಸೂಕ್ತ ಎಂಬ ಕಾರಣದಿಂದ ಸೋಮಣ್ಣ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ. ರೈತರ ಹಿತ ಕಾಯುವ ಸಂಕಲ್ಪದೊಂದಿಗೆ ಸೋಮಣ್ಣ ಅಭ್ಯರ್ಥಿಯಾಗಿದ್ದಾರೆ. ಅವರ ಆಯ್ಕೆ ಅತಿ ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಮತದಾರರು ಒಮ್ಮತದಿಂದ ಮತ ಚಲಾಯಿಸಬೇಕು’ ಎಂದು ಹೇಳಿದರು.
‘ಸೋಮಣ್ಣ ಅವರಿಗೆ ನೀಡುವ ಪ್ರತಿ ಮತವೂ ನನಗೆ ನೀಡಿದಂತೆ ಎಂಬ ಭಾವನೆಯಿಂದ ಮತ ಚಲಾಯಿಸಬೇಕು. ಬಿತ್ತನೆ ಬೀಜ ಸಂಗ್ರಹ, ವಿತರಣೆ ಸೇರಿದಂತೆ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೋಮಣ್ಣ ಅವರ ಆಯ್ಕೆ ಸೂಕ್ತವಾಗಿದೆ. ಕೃಷಿಕರೂ ಆದ ಅವರಿಗೆ ಮತ ಹಾಕಬೇಕು’ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ನಿರ್ದೇಶಕ ಎಂ.ಎಲ್.ಅನಿಲ್ಕುಮಾರ್, ವಕೀಲ ರವಿಕುಮಾರ್ ಹಾಜರಿದ್ದರು.