ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಶೋಚನೀಯ : ರೂಪಶ್ರೀ

ಶಿಸ್ತುಕ್ರಮ ಜರುಗಿಸುತ್ತೇವೆ: ಅಧಿಕಾರಿಗಳಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಖಡಕ್‌ ಎಚ್ಚರಿಕೆ
Last Updated 27 ಆಗಸ್ಟ್ 2018, 12:38 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿನ ಸರ್ಕಾರಿ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಸಮಿತಿ ಸದಸ್ಯರು ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಸಮಸ್ಯೆ ಕಂಡುಬಂದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಶ್ರೀ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿತ್ತು. ಅದಕ್ಕೆ ಈಗ ಕಡಿವಾಣ ಹಾಕಲಾಗಿದೆ. ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಇಲಾಖೆಯ 82 ವಿದ್ಯಾರ್ಥಿನಿಲಯಗಳಿದ್ದು, ಪ್ರಸಕ್ತ ವರ್ಷದ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಇಲಾಖೆಗೆ ಮಂಜೂರಾಗಿರುವ ಹುದ್ದೆಗಳ ಪೈಕಿ ಶೇ 75ಕ್ಕೂ ಹೆಚ್ಚು ಹುದ್ದೆ ಖಾಲಿ ಇವೆ. ಹೀಗಾಗಿ ದಿನಗೂಲಿ ಆಧಾರದಲ್ಲಿ ಸಿಬ್ಬಂದಿ ನೇಮಿಸಿಕೊಂಡು ಕನಿಷ್ಠ ವೇತನ ನೀಡಲಾಗುತ್ತಿದೆ. ಸಿಬ್ಬಂದಿ ಕೊರತೆ ಸಂಬಂಧ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ ನೇಮಕಾತಿ ನಡೆದಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸಿಂಧು ವಿವರಿಸಿದರು.

ಸಮಸ್ಯೆಯಿಲ್ಲ: ‘ತಾಲ್ಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ಯಾವುದೇ ಸಮಸ್ಯೆಯಿಲ್ಲ. ಈ ಹಿಂದೆ ಇದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತುಪ್ಪದ ಊಟ ವಿತರಿಸಲಾಗುತ್ತಿದೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಾಲಾಜಿ ಹೇಳಿದರು.

‘ಹಾಸ್ಟೆಲ್‌ಗಳಿಗೆ ಈ ಹಿಂದೆ ಸರಬರಾಜು ಮಾಡಿದ್ದ ತಟ್ಟೆ, ಲೋಟ, ಹಾಸಿಗೆ, ದಿಂಬು, ಚಾಪೆಯ ಗುಣಮಟ್ಟ ಕಳಪೆಯಾಗಿದ್ದ ಕಾರಣ ಬೇಗ ಹಾಳಾಗಿವೆ. ಈ ಬಾರಿ ಗುಣಮಟ್ಟದ ಸಾಮಗ್ರಿ ಖರೀದಿಸಿ ವಿತರಿಸಲಾಗಿದೆ. ಕಟ್ಟಡ ದುರಸ್ತಿ ಬಿಟ್ಟರೆ ಬೇರೆ ಯಾವುದೇ ಲೋಪವಿಲ್ಲ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷೆ ರೂಪಶ್ರೀ, ‘ಅಧಿಕಾರಿಗಳು ಹೇಳುವ ಮಾಹಿತಿ ಕೇಳುವುದಕ್ಕೆ ಚೆನ್ನಾಗಿದೆ. ಆದರೆ, ವಾಸ್ತವದಲ್ಲಿ ಹಾಸ್ಟೆಲ್‌ಗಳ ಪರಿಸ್ಥಿತಿ ಬೇರೆ ಇದೆ. ಸಮಿತಿ ಸದಸ್ಯರು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸುತ್ತಾರೆ. ಮಕ್ಕಳಿಂದ ಸಣ್ಣ ದೂರು ಕೇಳಿ ಬಂದರೂ ಅಧಿಕಾರಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಹೊರಗಿನ ವ್ಯಕ್ತಿಗಳು ವಾಸವಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ. ಹೋಬಳಿ ಕೇಂದ್ರದ ವಿದ್ಯಾರ್ಥಿನಿಲಯಗಳ ಕಡೆ ಹೆಚ್ಚು ಗಮನಹರಿಸಿ ದಾಖಲಾತಿ ಹೆಚ್ಚಿಸಿ’ ಎಂದು ಸಲಹೆ ನೀಡಿದರು.

ರಸ್ತೆ ದುರಸ್ತಿಯಾಗಿಲ್ಲ: ‘ಗ್ರಾಮೀಣ ಭಾಗದ ರಸ್ತೆಗಳನ್ನು ದುರಸ್ತಿ ಮಾಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ, ಈವರೆಗೂ ದುರಸ್ತಿ ಕಾರ್ಯ ಆರಂಭಿಸಿಲ್ಲ. ಮಳೆಗಾಲ ಆರಂಭವಾಗಿದ್ದು, ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ’ ಎಂದು ಸಮಿತಿ ಸದಸ್ಯ ಸಿ.ಎಸ್‌.ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ದೂಳಪ್ಪನವರ್, ‘ಈ ಹಿಂದೆ ರಸ್ತೆಗಳ ದುರಸ್ತಿಗೆ ಬಿಡುಗಡೆಯಾಗಿದ್ದ ₹ 3.22 ಕೋಟಿ ಅನುದಾನ ಬಳಕೆ ಮಾಡಲಾಗಿದೆ. ಬಾಕಿ ಕೆಲಸಕ್ಕೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅನುದಾನ ಬಿಡುಗಡೆಯಾಗುವ ಹಂತದಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯುಲ್ಲ. ವಾರಕ್ಕೊಮ್ಮೆ ತಾಲ್ಲೂಕುಗಳಿಂದ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆಯುತ್ತಿದ್ದು, ಸಮಸ್ಯಾತ್ಮಕ ಗ್ರಾಮಗಳು ಕಂಡುಬಂದರೆ ತುರ್ತು ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

ಮಳೆ ಕಡಿಮೆ: ‘ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕಡಿಮೆಯಾಗಿದ್ದು, ಬಿತ್ತೆಯಾಗಿರುವ ಬೆಳೆಗಳು ಒಣಗುತ್ತಿವೆ. ಆಗಸ್ಟ್ ಅಂತ್ಯದೊಳಗೆ ಮಳೆ ಬರದಿದ್ದರೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಹೇಳಿದರು.

‘2016–17ರಲ್ಲೂ ಮಳೆ ಕೊರತೆಯಾಗಿತ್ತು. ಆಗ ಬೆಳೆ ವಿಮೆ ಮಾಡಿಸಿದ್ದ 23 ಸಾವಿರ ರೈತರಿಗೆ ಅನುಕೂಲವಾಯಿತು. 2017–2018ರಲ್ಲಿ ಉತ್ತಮ ಮಳೆಯಾಗಿ ಬೆಳೆಗಳೂ ಚೆನ್ನಾಗಿ ಬಂದವು. ಇದರಿಂದ ಬೆಳೆ ಪರಿಹಾರ ನಿರೀಕ್ಷಿತ ರೈತರಿಗೆ ದೊರೆಯಲಿಲ್ಲ. ಈ ಬಾರಿ ಕೇವಲ 8 ಸಾವಿರ ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮಳೆ ಕಡಿಮೆಯಾಗಿರುವುದರಿಂದ ಒಣ ಭೂಮಿಯಲ್ಲಿ ರಾಗಿ ಬಿತ್ತಿದರೂ ಮಳೆ ಬಂದಾಗ ಬೆಳೆ ಆಗುತ್ತದೆ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಜಿಲ್ಲೆಯ ರೈತರು ಮಳೆಯಾಶ್ರಿತ ಬೆಳೆ ಅವಲಂಬಿಸಿರುವುದರಿಂದ ಅವರಿಗೆ ಏನು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿಲ್ಲ. ಬೆಳೆ ನಷ್ಟವಾಗುತ್ತದೆ ಎಂಬ ಭಯದಲ್ಲಿದ್ದಾರೆ. ಈ ಬಾರಿ ರೈತರಿಗೆ ಬೆಳೆ ವಿಮೆ ವರದಾನವಾಗಲಿದೆ’ ಎಂದು ಸದಸ್ಯ ವೆಂಕಟೇಶ್‌ ಅಭಿಪ್ರಾಯಪಟ್ಟರು.

ಸಮಿತಿ ಸದಸ್ಯರಾದ ಸಿ.ಎನ್.ಅರುಣ್‌ಪ್ರಸಾದ್, ಯೋಜನಾ ನಿರ್ದೇಶಕ ಮುನಿಯಪ್ಪ ಹಾಜರಿದ್ದರು.

* 541 ಹುದ್ದೆ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು
* 131 ಹುದ್ದೆಗಳು ಭರ್ತಿಯಾಗಿವೆ
* 410 ಹುದ್ದೆಗಳು ಖಾಲಿಯಿವೆ
* 269 ಮಂದಿ ದಿನಗೂಲಿ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT