ಮಾಲೂರು: ಸಾಮಾಜಿಕ ಕಾಳಜಿ ಮೇಳೈಸಿದ ಗಣಪ

ಮಾಲೂರು: ಕಾಬೂಲ್ ಏರ್ಪೋರ್ಟ್ನಲ್ಲಿ ತಾಲಿಬಾನ್ ಉಗ್ರರಿಂದ ಜನರನ್ನು ಕಾಪಾಡುತ್ತಿರುವ ಗಣಪ. ಭಾರತೀಯ ವಾಯುಸೇನೆಯ ದೇವಿ ಶಕ್ತಿ ಎಂಬ ಆಪರೇಷನ್ ಮೂಲಕ ಕಾಬೂಲ್ನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯರನ್ನು ಭಾರತಕ್ಕೆ ವಾಪಸ್ ಕರೆತರುತ್ತಿರುವ ಗಣಪ. ತಾಲಿಬಾನ್ನಲ್ಲಿರುವ ಜನತೆಗೆ ಜಾಗೃತಿ ಮೂಡಿಸುತ್ತಿರುವ ಗಣಪ!
ಪಟ್ಟಣದ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಶಿಕ್ಷಕ ದಯಾನಂದ ಅವರ ಮನೆಯಲ್ಲಿ ಇಂತಹ ಸಾಮಾಜಿಕ ಕಾಳಜಿ ಮೇಳೈಸಿದ ಗಣಪ ವಿಜೃಂಭಿಸಿದ್ದಾನೆ. ಶಿಕ್ಷಕರಾಗಿರುವ ದಯಾನಂದ ಮತ್ತು ಕೋಮಲ ದಂಪತಿ ತಮ್ಮ ಒಂದು ತಿಂಗಳ ಸಂಬಳ ಬಳಸಿ ವಿಶಿಷ್ಟ ಗಣಪತಿಯನ್ನು ಅನಾವರಣ ಮಾಡುತ್ತಾ ಬಂದಿದ್ದಾರೆ. ಸುಮಾರು 21 ವರ್ಷಗಳಿಂದ ಸಮಾಜಮುಖಿ ಗಣಪತಿಗಳನ್ನು ಪ್ರತಿಷ್ಠಾಪಿಸುತ್ತಿರುವುದು ವಿಶೇಷ.
ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರಾಗಿರುವ ದಯಾನಂದ ಅವರಿಗೆ ಸಂಬಳ ಬರುತ್ತಿಲ್ಲ. ಪತ್ನಿ ಕೋಮಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವುದರಿಂದ ಅವರ ಸಹಕಾರ ಪಡೆದು ಥರ್ಮಾಕೋಲ್ ಬಳಸಿ ದೇಶದಲ್ಲಿ ನಡೆಯುತ್ತಿರುವ ಸುಮಾರು 20 ಪ್ರಮುಖ ವಿದ್ಯಾಮಾನದ ಚಿತ್ರಗಳನ್ನು ಮೂಡಿಸಿದ್ದಾರೆ.
ಪೆಟ್ರೋಲ್ ದುಬಾರಿಯಿಂದ ಸೈಕಲ್ ತುಳಿಯುತ್ತಿರುವ ಗಣಪ, ಪ್ರತೇಕ ರಾಜ್ಯ ಬಯಸುತ್ತಿರುವ ಜನತೆಗೆ ಕರ್ನಾಟಕವನ್ನು ಒಡೆಯಬೇಡಿ; ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂದು ತಿಳಿಹೇಳುತ್ತಿರುವ ಗಣಪ, ಗಣ್ಯರ ಕಪ್ಪುಹಣದ ಮೇಲೆ ದಾಳಿ ನಡೆಸುತ್ತಿರುವ ಗಣಪ, ಸ್ವದೇಶಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಸ್ವದೇಶಿ ಉತ್ಪನ್ನ ಬಳಸಬೇಕೆನ್ನುವ ಗಣಪ ಹೀಗೆ ದೇಶದಲ್ಲಿನ ಪ್ರಮುಖ ಘಟನೆಗಳನ್ನು ಮುಂದಿಟ್ಟುಕೊಂಡು ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.
ತಾಲಿಬಾನಿಗಳ ಹಿಂಸಾಚಾರವನ್ನು ಕಣ್ಣಿಗೆ ಕಟ್ಟಿದಂತೆ ತಿಳಿಸುವ ಅವರು ಥರ್ಮಾಕೋಲ್ ಬಳಸಿ ವಿಮಾನದಿಂದ ಅಲ್ಲಿನ ಜನತೆಯನ್ನು ಗಣಪತಿ ಕಾಪಾಡುವ ದೃಶ್ಯವನ್ನು ನಿರ್ಮಿಸಿದ್ದಾರೆ. ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಲೈಟಿಂಗ್ ನೀಡಿದ್ದಾರೆ. ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಪಟ್ಟಣದಲ್ಲಿನ ಸರ್ಕಾರಿ ಶಾಲೆಗಳು ಸೋಮವಾರದಿಂದ ಆರಂಭವಾಗುವುದರಿಂದ ಬಿಇಒ ಕೃಷ್ಣಮೂರ್ತಿ ಈ ವಿಭಿನ್ನ ಗಣೇಶಗಳನ್ನು ನೋಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಭರವಸೆ ಇದೆ ಎನ್ನುತಾರೆ ಶಿಕ್ಷಕ ದಯಾನಂದ್.
ಕೋವಿಡ್ ನಿಯಮ ಅಳವಡಿಸಿರುವ ದಯಾನಂದ ದಂಪತಿ ಪ್ರತಿವರ್ಷ ಗಣೇಶನನ್ನು ನೋಡಲು ಬರುವವರಿಗೆ ಪ್ರಸಾದ ನೀಡುತ್ತಿದ್ದರು. ಈ ಬಾರಿ ಒಂದೊಂದು ಗಿಡ ನೀಡುವ ಮೂಲಕ ಪರಿಸರ ಸಂರಕ್ಷಣೆಯ ಕಾಳಜಿ ಮೆರೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.