ಶ್ರೀನಿವಾಸಪುರ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜೂ. 28 ರಿಂದ ಜುಲೈ 1 ರವರೆಗೆ ಶ್ರೀನಿವಾಸಪುರ ಹಬ್ಬ– 2018 ಆಚರಿಸಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶ್ರೀನಿವಾಸಪುರ ಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸಲಾಗುತ್ತಿದೆ. ದೇಶಪ್ರೇಮಿಗಳಿಗೆ, ಕ್ರೀಡಾ ಪ್ರೇಮಿಗಳಿಗೆ, ಕಲಾಪ್ರಿಯರಿಗೆ, ಧಾರ್ಮಿಕ ಆಸಕ್ತರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು’ ಎಂದು ಹೇಳಿದರು.
‘28 ರಂದು ಸಂಜೆ 6 ಗಂಟೆಗೆ ಶಿವಾರೆಡ್ಡಿ ತಂಡದಿಂದ ಹಾಸ್ಯ ಕಾರಂಜಿ, 29 ರಂದು ಅದೇ ಸಮಯಕ್ಕೆ ಮಂಜುಳಾ ಗುರುರಾಜ್ ತಂಡದಿಂದ ಮೂಸಿಕಲ್ ಡ್ಯಾನ್ಸ್ ನೈಟ್, 30ರ ಸಂಜೆ 5ಕ್ಕೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಿಂಹಾಚಲಂ ವರಾಹ ಲಕ್ಷ್ಮೀನರಸಿಂಹಸ್ವಾಮಿ ವಿಗ್ರಹಗಳ ಮೆರವಣಿಗೆ ನಡೆಯಲಿದೆ’ ಎಂದು ಹೇಳಿದರು.
‘ಜುಲೈ 1 ರಂದು ಬೆಳಿಗ್ಗೆ 9ಕ್ಕೆ ಲೋಕ ಕಲ್ಯಾಣಾರ್ಥ ಸಿಂಹಾಚಲಂ ವರಾಹ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ. ಉತ್ಸವದ ಬಳಿಕ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6ಕ್ಕೆ ಸುಧಾ ಬರಗೂರು ಹಾಗೂ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಹಬ್ಬ, ರಾವ್ ಬದರಿನಾಥ್ ಅವರಿಂದ ಮ್ಯಾಜಿಕ್ ಶೋ, ಬೆಂಗಳೂರಿನ ಬೀಟ್ ಗುರೂಸ್ ಅವರಿಂದ ಬೀಟ್ಸ್ ಹಬ್ಬ ಜರುಗಲಿದೆ’ ಎಂದು ವಿವರಿಸಿದರು.
‘ಎಲ್ಲ ವಯೋಮಾನದ ಹಾಗೂ ಬೇರೆ ಬೇರೆ ಆಸಕ್ತಿ ಹೊಂದಿರುವ ಜನರನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ದೇವರ ದಯೆಯಿಂದ ತಾಲ್ಲೂಕಿನಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಬೆಳೆಯೂ ಕೈಗೆ ಸಿಗುತ್ತಿದೆ. ದೇವರಲ್ಲಿ ನಂಬಿಕೆ ಇಡಬೇಕು ಎಂಬುದು ನಮ್ಮ ಹಿರಿಯರ ಮಾತು. ನಂಬಿಕೆ ನಿಜವಾದಾಗ ದೇವರಿಗೆ ಕೃತಜ್ಞತೆ ಅರ್ಪಿಸುವುದು ಕರ್ತವ್ಯ. ಆ ನಿಟ್ಟಿನಲ್ಲಿ ಕೆಲವು ವರ್ಷಗಳಿಂದ ದೇವರ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.
‘ಜಾತ್ಯತೀತ ಹಾಗೂ ಪಕ್ಷಾತೀತ ನೆಲೆಯಲ್ಲಿ ನಡೆಯುವ ಈ ಹಬ್ಬದಲ್ಲಿ ಎಲ್ಲರೂ ಭಾಗವಹಿಸಬೇಕು. ಹಬ್ಬದ ಸಡಗರ ಮನ, ಮನೆ ತುಂಬಬೇಕು’ ಎಂದು ಆಶಿಸಿದರು.