ಕೋಲಾರ: ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ವಿಸ್ತರಿಸಲು ಪೂರಕ ಕಾರ್ಯಕ್ರಮಗಳು ಕಾರಣವಾಗುತ್ತವೆ. ಅಂತಹ ಕಾರ್ಯಕ್ರಮಗಳಲ್ಲಿ ಇಕೋ ಕ್ಲಬ್ ಚಟುವಟಿಕೆಯೂ ಒಂದು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರಾಜ್ ತಿಳಿಸಿದರು.
ಇಕೋ ಕ್ಲಬ್ ನಗರದ ರಹಮತ್ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಮೂಡಿಸುವುದರೊಂದಿಗೆ ಇಕೋ ಕ್ಲಬ್ ಸೂಚಿಸುವ ಎಲ್ಲ ಹಬ್ಬಗಳನ್ನು ಆಚರಿಸಬೇಕು. ಮಕ್ಕಳಿಗೆ ಶಿಕ್ಷಕರು ಮಾದರಿ ಆಗುವುದರೊಂದಿಗೆ ಪರಿಸರದ ಪ್ರಜ್ಞೆ ಹಾಗೂ ಅದರ ಬಗ್ಗೆ ಕಳಕಳಿಯೂ ಇರಬೇಕು. ನಮ್ಮ ಪರಿಸರದಲ್ಲಿ ಜವಾಬ್ದಾರಿಯಿಂದ ಬದುಕುವುದನ್ನು, ಕಲಿಯಬೇಕು. ಪರಿಸರವನ್ನು ಉಳಿಸಿ ಬೆಳೆಸುವ ಕೆಲಸಗಳನ್ನು ಮಾಡುವ ಸಾಮರ್ಥ್ಯ ಯಾವಾಗಲೂ ಇರುವಂತೆ ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ವರ್ತನಾ ಬದಲಾವಣೆಗಳಾಗಬೇಕು. ಪರಿಸರವನ್ನು ಉಳಿಸಿ ಬೆಳೆಸಿ ಸಂರಕ್ಷಿಸುವ ಅಗತ್ಯವನ್ನು, ಅದಕ್ಕಾಗಿ ಆಗಬೇಕಾದ ಜವಾಬ್ದಾರಿಯುತ ಅಪೇಕ್ಷಿತ ವರ್ತನೆಗಳನ್ನು ವಿದ್ಯಾರ್ಥಿಗಳು ಪರಿಸರ ಸಂಘಗಳ ಮೂಲಕ ಹೊಂದುತ್ತಾರೆ.ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಶಾಲೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಪರ್ವೀನ ಬೇಗಂ ಮಾತನಾಡಿ, ವಿದ್ಯಾರ್ಥಿಗಳನ್ನು ಪರಿಸರದ ಕಡೆಗೆ ಕೊಂಡೊಯ್ಯುವುದು ಹಾಗೂ ಪರಿಸರವನ್ನು ತರಗತಿಗಳಿಗೆ ತರುವುದು ಪರಿಸರ ಸಂಘಗಳ ಮೂಲ ಉದ್ದೇಶವಾಗಿದೆ. ಶಾಲಾ ಆವರಣದ ಸುತ್ತಲೂ ಕಸ ಹರಡದೆ ಕಸದ ಗುಂಡಿಯಲ್ಲಿ ಕಸ ಹಾಕಿ ಸಸಿಗಳಿಗೆ ಗೊಬ್ಬರ ಮಾಡಿಕೊಳ್ಳುವುದು ಸೂಕ್ತ. ಅಲ್ಲದೆ ನೆಟ್ಟ ಗಿಡ ಕಾಪಾಡುವುದು ಮಕ್ಕಳ ಶಿಕ್ಷಕರ ಜವಾಬ್ದಾರಿ ಎಂದರು.