ಮನೆ ಕುಸಿತ: ಬಾಳೆ ತೋಟ ನಾಶ

ನಂಗಲಿ: ನಿವಾರ್ ಚಂಡಮಾರುತದ ಪರಿಣಾಮ ಭಾರೀ ಮಳೆ ಮತ್ತು ಗಾಳಿಗೆ ಮುಷ್ಟೂರು ಮತ್ತು ಪೆದ್ದೂರು ಗ್ರಾಮಗಳಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ.
ಮುಷ್ಟೂರು ಗ್ರಾಮದ ನಾಗಮಣಿ ಮತ್ತು ವಿಜಯಮ್ಮ, ಪೆದ್ದೂರು ಗ್ರಾಮದ ಸೂರ್ಯನಾರಾಯಣಪ್ಪ ಎಂಬುವರ ಮನೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ದಿನಸಿ ಮತ್ತು ಇತರೆ ವಸ್ತುಗಳು ನಾಶಗೊಂಡಿವೆ. ಸೂರ್ಯನಾರಾಯಣಪ್ಪ ಅವರ ಕಾಲು ಮುರಿದಿದೆ. ಬೈರಕೂರು ಗ್ರಾಮದ ರಾಮಾಂಜಿ ಎಂಬುವರ ಮೂರು ಎಕರೆ ಬಾಳೆ ತೋಟ ಸಂಪೂರ್ಣವಾಗಿ ಕೆಳಗೆ ಬಿದ್ದಿದೆ. ಇದರಿಂದಾಗಿ ಸುಮಾರು ₹ 5 ಲಕ್ಷ ನಷ್ಟವಾಗಿದೆ ಎಂದು ರೈತ ರಾಮಾಂಜಿ ತಿಳಿಸಿದರು.
ಮಳೆಯಿಂದ ಮನೆಗಳು ಮತ್ತು ಬಾಳೆ ತೋಟ ನಾಶವಾದ ಸುದ್ದಿ ತಿಳಿದ ಕೂಡಲೆ ಸ್ಥಳಕ್ಕೆ ತಹಶೀಲ್ದಾರ್ ಕೆ.ಎನ್ ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಆಯಾ ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಮನೆಗಳನ್ನು ಒದಗಿಸಿದರು. ಗಾಯಾಳು ಸೂರ್ಯನಾರಾಯಣಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ನೆಲಕ್ಕುರುಳಿದ ಬೀನ್ಸ್ ತೋಟ: ಯಡಹಳ್ಳಿಯ ರೈತ ಷಣ್ಮುಗಂ ಎಂಬುವರ ಬೀನ್ಸ್ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ.
ಷಣ್ಮುಗಂ 1.5 ಎಕರೆ ಪ್ರದೇಶದಲ್ಲಿ ಬೀನ್ಸ್ ಬೆಳೆ ಬೆಳೆದಿದ್ದರು. ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರುವ ಹಂತದಲ್ಲಿತ್ತು. ಗಾಳಿ ಮತ್ತು ಮಳೆಗೆ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ. ಸ್ಥಳಕ್ಕೆ ತಹಶೀಲ್ದಾರ್ ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿ, ನಾಶವಾಗಿರುವ ತೋಟಕ್ಕೆ ಪರಿಹಾರ ಕೊಡಿಸಲಾಗುವುದು ಎಂದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.