ಬೇತಮಂಗಲ: ವಾಣಿಜ್ಯ ತರಕಾರಿಗಳಿಗೆ ಹೆಸರು ವಾಸಿಯಾಗಿರುವ ಕೋಲಾರ ಜಿಲ್ಲೆಯ ರೈತರಿಗೆ ಟೊಮೆಟೊ ಬೆಳೆ ತೀರಾ ಸಂಕಷ್ಠಕ್ಕೆ ಸಿಲುಕಿಸಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದ ಹೊರ ವಲಯದಲ್ಲಿ ಯುವ ರೈತ ಪ್ರವೀಣ್ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆ ಬೆಳೆದು ತೀರಾ ಸಂಕಷ್ಟಕ್ಕೀಡಾಗಿದ್ದಾರೆ.
ಪ್ರವೀಣ್ ಅವರ ಕೃಷಿಯಲ್ಲಿನ ಪ್ರೀತಿಯಿಂದ ಮೊದಲ ಬಾರಿಗೆ ಟೊಮೆಟೊ ಬೆಳೆಯನ್ನು ಅಲ್ಪ-ಸ್ವಲ್ಪ ನೀರನ್ನು ಬಳಸಿಕೊಂಡು ಬೆಳೆದಿದ್ದರು. ಇದೀಗ ಸೂಕ್ತ ಬೆಲೆ ಇಲ್ಲದೆ ಟೊಮೆಟೊ ತೋಟದಲ್ಲಿಯೇ ಬಿಟ್ಟಿದ್ದಾರೆ.
ಆರು ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದ್ದು, ಇದಕ್ಕೆ ಉಳುಮೆ, ಗೊಬ್ಬರ, ಔಷಧಿ, ಕೂಲಿ ಕಾರ್ಮಿಕರ ವೆಚ್ಚ ಸೇರಿದಂತೆ ಸುಮಾರು ₹1.60 ಲಕ್ಷದವರೆಗೂ ಖರ್ಚು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸುಮಾರು 19 ಕೆ.ಜಿಯ ಟೊಮೆಟೊ ಬಾಕ್ಸ್ಗೆ ₹20-30ಕ್ಕೆ ಮಾರಾಟವಾಗುತ್ತಿದೆ.
‘ಸುಮಾರು ಮೂರು ತಿಂಗಳು ಪೋಷಣೆ ಮಾಡಿ ಬೆಳೆದ ಬೆಲೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ. ಸಾಗಣೆ ವೆಚ್ಚವೂ ಬರುವುದಿಲ್ಲ ಎಂದು ಹಣ್ಣನ್ನು ತೋಟದಲ್ಲಿಯೇ ಬಿಡಲಾಗಿದೆ.’ ಎನ್ನುತ್ತಾರೆ ರೈತ ಪ್ರವೀಣ್.