ಬೆಂಗಳೂರು: ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಗೋಹತ್ಯೆ ನಿಷೇಧ ಮಾಡುವುದಾಗಿ ಹಾಗೂ ದೇವಸ್ಥಾನಗಳ ಆದಾಯವನ್ನು ಧಾರ್ಮಿಕ ಚಟುವಟಿಕೆಗೆ ಬಳಸುವುದಾಗಿ ವಾಗ್ದಾನ ಮಾಡಿದೆ.
ಗೋ ಸೇವಾ ಆಯೋಗ ಮತ್ತೆ ಆರಂಭ. ಕೋಮು ಪ್ರಚೋದಿಸುವ ಪಿಎಫ್ಐ ಹಾಗೂ ಕೆಎಫ್ಡಿ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು. ದೇವಸ್ಥಾನಗಳ ಪುನರುಜ್ಜೀವನ ಹಾಗೂ ಮಠಗಳ ಮೂಲಸೌಕರ್ಯಕ್ಕಾಗಿ ಆರಂಭಿಕ ₹500 ಕೋಟಿಯ ಮೂಲನಿಧಿಯೊಂದಿಗೆ ‘ದೇವಸ್ಥಾನ ಪುನರುತ್ಥಾನ ನಿಧಿ’ಗೆ ಚಾಲನೆ.
ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಸಿದ್ಧಪಡಿಸಿರುವ ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಪ್ರಣಾಳಿಕೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದರು. ಹಿಂದೂಗಳು, ರೈತರು, ಮಹಿಳೆಯರು ಹಾಗೂ ಯುವಜನರ ಮತ ಸೆಳೆಯಲು ಪಕ್ಷವು ಕೊಡುಗೆಗಳ ಮಹಾಪೂರವನ್ನೇ ಹರಿಸಿದೆ.
ಲೋಕಾಯುಕ್ತಕ್ಕೆ ಮತ್ತೆ ಪರಮಾಧಿಕಾರ. ‘ಮುಖ್ಯಮಂತ್ರಿ ಸ್ಮಾರ್ಟ್ಫೋನ್ ಯೋಜನೆ’ಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ಫೋನ್. ಕಾಲೇಜಿಗೆ ಸೇರುವ ಪ್ರತಿ ವಿದ್ಯಾರ್ಥಿಗೆ ‘ಮುಖ್ಯಮಂತ್ರಿ ಲ್ಯಾಪ್ಟಾಪ್’ ಯೋಜನೆಯಡಿ ಉಚಿತ ಲ್ಯಾಪ್ಟಾಪ್. ‘ವಿವಾಹ ಮಂಗಳ’ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ ₹25 ಸಾವಿರ ಮತ್ತು 3 ಗ್ರಾಂ ಚಿನ್ನದ ತಾಳಿ. ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ನೀಡುವ ಮೊತ್ತ ₹2 ಲಕ್ಷಕ್ಕೆ ಹೆಚ್ಚಳ.
ಎಲ್ಲ ನೀರಾವರಿ ಯೋಜನೆಗಳನ್ನು 2023ರೊಳಗೆ ಪೂರ್ಣಗೊಳಿಸಲು ₹1.5 ಲಕ್ಷ ಕೋಟಿಯ ‘ಸುಜಲಾಂ ಸುಫಲಾಂ ಕರ್ನಾಟಕ’ ಯೋಜನೆ ಜಾರಿ. ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ಷಟ್ಪಥ ‘ಕರ್ನಾಟಕ ಮಾಲಾ’ ಹೆದ್ದಾರಿ ನಿರ್ಮಾಣ. ರೈತರ ಪಂಪ್ಸೆಟ್ಗಳಿಗೆ ನಿತ್ಯ 10 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಸುವುದಾಗಿ ಪಕ್ಷ ಆಶ್ವಾಸನೆ ನೀಡಿದೆ.
ಪ್ರಣಾಳಿಕೆಯ ಪ್ರಮುಖ ಅಂಶಗಳು:
* 2 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ ತಲಾ ₹10 ಸಾವಿರ ಆರ್ಥಿಕ ನೆರವು ನೀಡುವ ‘ನೇಗಿಲ ಯೋಗಿ’ ಯೋಜನೆ.
*ಬೆಲೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ ₹5 ಸಾವಿರ ಕೋಟಿಯ ‘ರೈತ ಬಂಧು ಆವರ್ತ ನಿಧಿ’
* ಕೆರೆಗಳ ಪುನಶ್ಚೇತನಕ್ಕಾಗಿ ‘ಮಿಷನ್ ಕಲ್ಯಾಣಿ’ ಯೋಜನೆ
*ಕೃಷಿ ತರಬೇತಿ ಪಡೆಯುವ ರೈತರ ಮಕ್ಕಳಿಗಾಗಿ ₹100 ಕೋಟಿ ಮೊತ್ತದ ‘ರೈತ ಬಂಧು ವಿದ್ಯಾರ್ಥಿ ವೇತನ’
*ಕೆಎಂಎಫ್ ಮೂಲಕ ಹಣ್ಣು ಮತ್ತು ತರಕಾರಿಗಳ ರಫ್ತು ಉತ್ತೇಜನಕ್ಕಾಗಿ ₹3 ಸಾವಿರ ಕೋಟಿ ನಿಧಿ
*ಹಾಲು ಉತ್ಪಾದನೆ ನಿತ್ಯ 1 ಕೋಟಿ ಲೀಟರ್ಗೆ ಏರಿಕೆ
*ಮಹಿಳಾ ಸಹಕಾರಿ ಸಂಸ್ಥೆ ನಿರ್ಮಾಣಕ್ಕೆ ₹10 ಸಾವಿರ ಕೊಟಿಯ ‘ಸ್ತ್ರೀ ಉನ್ನತಿ ನಿಧಿ’
*ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇ 1ರ ಬಡ್ಡಿದರದಲ್ಲಿ ₹2 ಲಕ್ಷದ ವರೆಗೆ ಸಾಲ
* ‘ಸ್ತ್ರೀ ಸುವಿಧಾ’ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್, ಉಳಿದ ಮಹಿಳೆಯರಿಗೆ ₹1 ಕ್ಕೆ ಸ್ಯಾನಿಟರಿ ನ್ಯಾಪ್ಕಿನ್
*ಹುಬ್ಬಳ್ಳಿ, ಬೆಂಗಳೂರು, ರಾಯಚೂರು, ಕಲಬುರ್ಗಿ, ಮೈಸೂರು ಮತ್ತು ಮಂಗಳೂರಿನಲ್ಲಿ ನವೋದ್ಯಮ ಕಂಪನಿಗಳಿಗೆ ಸೌಲಭ್ಯ ಕಲ್ಪಿಸಲು 6 ‘ಕೆ–ಹಬ್’ಗಳ ಸ್ಥಾಪನೆ
*ಎಲ್ಲರಿಗೂ ಅನ್ನ ದಾಸೋಹ ಯೋಜನೆ
*300ಕ್ಕಿಂತಲೂ ಹೆಚ್ಚು ಕಡೆ ‘ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್’ ಸ್ಥಾಪನೆ
*ಕರ್ನಾಟಕ ಜ್ಞಾನ ಆಯೋಗ ಮತ್ತು ರಾಜ್ಯ ಯೋಜನಾ ಮಂಡಳಿ ಬದಲಿಸಿ ‘ಕೀರ್ತಿ’ ಆಯೋಗ ಸ್ಥಾಪನೆ
*ಮೂಲಸೌಕರ್ಯ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ‘ನವ ಕರ್ನಾಟಕ ನಿರ್ಮಾಣ ಕಾರ್ಯಪಡೆ’ ರಚನೆ
*ಸರ್ಕಾರ ಅಸ್ತಿತ್ವಕ್ಕೆ ಬಂದ 100 ದಿನಗಳಲ್ಲೇ, ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆ ಕುರಿತ ಶ್ವೇತಪತ್ರ ಬಿಡುಗಡೆ
* ‘ಭ್ರಷ್ಟಾಚಾರ ವಿರೋಧಿ ಸಹಾಯವಾಣಿ’ ಮುಖ್ಯಮಂತ್ರಿ ಕಚೇರಿ ಅಧೀನದಲ್ಲಿ ಆರಂಭ
* ಮಾಫಿಯಾರಾಜ್ ಕೊನೆಗೊಳಿಸಲು ವಿಶೇಷ ಕಾರ್ಯಪಡೆ ಸ್ಥಾಪನೆ
* ಕರ್ನಾಟಕ ಶಾಲಾ–ಕಾಲೇಜು ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ
* ಉನ್ನತ ಶಿಕ್ಷಣ ಪಡೆಯುವ ಬಿಪಿಎಲ್ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ. ಪದವಿ ವಿದ್ಯಾರ್ಥಿಗಳಿಗೆ ₹3 ಲಕ್ಷ ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ₹5 ಲಕ್ಷದ ವರೆಗೂ ಸಾಲ
*ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಒಂದೇ ವೇದಿಕೆಯಡಿ ತರಲು ‘ನಾಲ್ವಡಿ ಕೃಷ್ಣರಾಜ ಒಡೆಯರ್ ಗ್ರಾಮೀಣಾಭಿವೃದ್ಧಿ ಮಿಷನ್’ ಸ್ಥಾಪನೆ
* ಕನ್ನಡೇತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಕಡ್ಡಾಯ ಪರೀಕ್ಷಾರಹಿತ ಪ್ರಾಸ್ತಾವಿಕ ವಿಷಯವಾಗಿ ಅಳವಡಿಕೆ
* ಪ್ರವಾಸೋದ್ಯಮ ಅಭಿವೃದ್ಧಿಗೆ ₹2500 ಕೋಟಿ ಅನುದಾನ
* ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ ಸ್ಮಾರಕ ಹಾಗೂ ವೀರ ವನಿತೆ ಒನಕೆ ಓಬವ್ವ ಸ್ಮಾರಕ ನಿರ್ಮಾಣ
*ದೇವನಹಳ್ಳಿಯಲ್ಲಿ ‘ರಾಜ್ಕುಮಾರ್ ಮೆಗಾ ಫಿಲ್ಮ್ ಸಿಟಿ’ ನಿರ್ಮಾಣ. ಸಿನಿಮಾ ಕಲಾವಿದರ ಕಲ್ಯಾಣಕ್ಕಾಗಿ ‘ಪುಟ್ಟಣ್ಣ ಕಣಗಾಲ್ ಮೂಲನಿಧಿ’ ಸ್ಥಾಪನೆ
*ಹೊಸಪೇಟೆಯಿಂದ ಹೈದರಾಬಾದ್ವರೆಗೆ ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ ಮತ್ತು ಬೀದರ್ ಮೂಲಕ ಹಾದುಹೋಗುವ ‘ಹೈದರಾಬಾದ್ ಕರ್ನಾಟಕ ಕೈಗಾರಿಕಾ ಮೆಗಾ ಕಾರಿಡಾರ್’ ಸ್ಥಾಪನೆ
ಬಿಜೆಪಿ ಪ್ರಣಾಳಿಕೆ ನಮ್ಮ ಕಾಪಿ: ಸಿದ್ದರಾಮಯ್ಯ
ಸಂತೇಬೆನ್ನೂರು: ‘ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ನಮ್ಮ ಕಾರ್ಯಕ್ರಮಗಳನ್ನೇ ಕಾಪಿ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಇಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ಪರ ಪ್ರಚಾರ ಮಾಡಿದ ಅವರು, ‘ಅನ್ನಪೂರ್ಣ’ ಎಂಬ ಹೆಸರಿಟ್ಟು ‘ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಕಾಪಿ ಮಾಡಲಾಗಿದೆ. ಈ ಮೊದಲೂ ಬಿಜೆಪಿಯವರು ಪ್ರಣಾಳಿಕೆ ಮಾಡಿದ್ದಾರೆ. ಆದರೆ, ಪ್ರಣಾಳಿಕೆಯಲ್ಲಿರುವ ಎಷ್ಟು ಅಂಶಗಳನ್ನು ಈಡೇರಿಸಿದ್ದಾರೆ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.
‘ಕ್ಯೂಂ ಝೂಟ್ ಬೋಲ್ ರಹೇ ಹೋ? ಕಿತ್ನಾ ಝೂಟ್ ಬೋಲೋಗೆ’ (ಸುಳ್ಳು ಯಾಕೆ ಹೇಳುತ್ತಿರುವಿರಿ? ಇನ್ನೆಷ್ಟು ಸುಳ್ಳುಗಳನ್ನೇ ಹೇಳುವಿರಿ?) ಎಂದು ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಹಿಂದಿಯಲ್ಲಿ ಪ್ರಶ್ನಿಸಿದರು.
ದಲಿತ, ಹಿಂದುಳಿದ ಜಾತಿಗಳತ್ತ ಚಿತ್ತ
* ₹ 8,500 ಕೋಟಿ ಮೊತ್ತದ ‘ಮಾದಾರ ಚೆನ್ನಯ್ಯ ವಸತಿ ಯೋಜನೆ’ಯಡಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಆಧುನಿಕ ಮನೆಗಳ ನಿರ್ಮಾಣ
* ಡಾ.ಬಿ.ಆರ್.ಅಂಬೇಡ್ಕರ್ ಬದುಕಿನ ಜತೆಗೆ ಸಂಬಂಧ ಹೊಂದಿರುವ ಸ್ಥಳಗಳಾದ ಮೌ, ನಾಗಪುರ, 26 ಆಲಿಪುರ ರಸ್ತೆ (ದೆಹಲಿ), ದಾದರ್ ಮತ್ತು ಲಂಡನ್ಗೆ ಭೇಟಿ ನೀಡಲು ‘ಡಾ.ಭೀಮರಾವ್ ರಾಮ್ಜೀ ಅಂಬೇಡ್ಕರ್ ತೀರ್ಥಸ್ಥಳ ಯಾತ್ರೆ’ ನಿಧಿಗೆ ಅನುದಾನ
* ಸಾಂಪ್ರದಾಯಿಕ ಕಸುಬು ನಡೆಸುವವರ ಕಲ್ಯಾಣಕ್ಕಾಗಿ ಒಬಿಸಿ ನಿಧಿಯಡಿ ₹1,000 ಕೋಟಿ ಹಣ
* ಒಬಿಸಿಗಳಿಗೆ ಆಧುನಿಕ ಸೌಲಭ್ಯ ಹೊಂದಿರುವ ವಸತಿ ಸಂಕೀರ್ಣಗಳನ್ನು ನಿರ್ಮಿಸಲು ₹7,500 ಕೋಟಿ ನಿಗದಿ
* ಸರ್ಕಾರ ರಚನೆಯಾದ ಮೂರು ತಿಂಗಳೊಳಗೆ ನೇಕಾರರ ₹1 ಲಕ್ಷದ ವರೆಗಿನ ಸಾಲ ಮನ್ನಾ
* ತಿಗಳ, ಸವಿತಾ ಸಮಾಜ, ಈಡಿಗ, ಬಿಲ್ಲವ ಹಾಗೂ ಯಾದವ ಸಮುದಾಯಗಳ ಕಲ್ಯಾಣ ಮಂಡಳಿ ಸ್ಥಾಪನೆ
* ಪ್ರತಿವರ್ಷ ಅಮರಶಿಲ್ಪಿ ಜಕಣಾಚಾರಿ ಜಯಂತಿ
* ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನ ರದ್ದು
*ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ₹1500 ಕೋಟಿ ಮೊತ್ತದ ‘ಮಹರ್ಷಿ ವಾಲ್ಮಿಕಿ ವಿದ್ಯಾರ್ಥಿ ವೇತನ ಯೋಜನೆ’
* ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ₹ 3 ಸಾವಿರ ಕೋಟಿಯ ‘ಬಾಬು ಜಗಜೀವನ್ರಾಮ್ ವಿದ್ಯಾರ್ಥಿ ವೇತನ ಯೋಜನೆ’
ಜನಪರ ಪ್ರಣಾಳಿಕೆಯಿಂದಾಗಿ ಬಿಜೆಪಿ ಮತ ಪ್ರಮಾಣ ಶೇ 4ರಷ್ಟು ಹೆಚ್ಚಲಿದೆ
–ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.