ಕೋಲಾರ: ನಗರದ ಪಿ.ಸಿ.ಬಡಾವಣೆಯ ರೇಣುಕಾಂಭ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿ ವೈಭವದಿಂದ ನೆರವೇರಿತು.
ಶನಿವಾರ ರಾತ್ರಿ 9.15 ಗಂಟೆ ಕರಗ ಹೊತ್ತ ಕರಗದ ಪೂಜಾರಿ ಬೇತಮಂಗಲ ಮಂಜುನಾಥ್ ಹೊರ ಬರುತ್ತಿದ್ದಂತೆ ಭಕ್ತರು ಗೋವಿಂದಾ, ಗೋವಿಂದಾ ಜೈಕಾರ ಹಾಕಿದರು. ವೇದಿಕೆಯಲ್ಲಿ ಒಂದು ಗಂಟೆ ಕಾಲ ವಿವಿಧ ಬಂಗಿಯಲ್ಲಿ ನೃತ್ಯ ಪ್ರದರ್ಶಿಸಿದರು.
ಇದೇ ಸಂದರ್ಭದಲ್ಲಿ ಕರಗದೊಂದಿಗೆ ವಿವಿಧ ದೇವರುಗಳ ಪಲ್ಲಕ್ಕಿ ಮೆರವಣಿಗೆ ನಡೆಯಿತು. 27ನೇ ವರ್ಷದ ಕರಗ ಮಹೋತ್ಸವದ ನಂತರ ಭಾನುವಾರ ಮಧ್ಯಾಹ್ನ 5 ಗಂಟೆಗೆ ಅಗ್ನಿಕುಂಡ ಪ್ರವೇಶ ನಡೆಯಿತು.
ನಗರದ ಅಂಬೇಡ್ಕರ್ ನಗರದ ರೇಣುಕಾ ಯಲ್ಲಮ್ಮ ದೇವಿಯ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಕರಗ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಜೀ ಕನ್ನಡದ ಖ್ಯಾತಿಯ ಸರಿಗಮಪ ಸೀಸನ್ 15-16ರ ಸ್ಟಾರ್ ಸಿಂಗರ್ಸ್ ಆದ ಮೆಹಬೂಬ್ ಸಾಬ್, ಸುಹಾನ ಸೈಯದ್, ಮಿಮಿಕ್ರಿ ಗೋಪಿರ ತಂಡದಿಂದ ಚಿತ್ರಗೀತೆಗಳು, ಜನಪದ ಗೀತೆಗಳು, ಮನರಂಜನಾ ಕಾರ್ಯಕ್ರಮ ಹಾಗೂ ಉಮೇಶ್ ಮತ್ತು ತಂಡದವರಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ನಡೆಯಿತು.
ಕರಗ ಮಹೋತ್ಸವದ ಅಂಗವಾಗಿ ರಥೋತ್ಸವ, ದೀಪೋತ್ಸವ, ಅಗ್ನಿಕುಂಡ ಪ್ರವೇಶ, ಮುತ್ತಿನ ಪಲ್ಲಕ್ಕಿ ಮೆರವಣಿಗೆ, ವಸಂತೋತ್ಸವ, ದೀಪಾಲಂಕಾರ ಮತ್ತಿತರ ಕಾರ್ಯಕ್ರಮಗಳು ನೆರವೇರಿತು.
ಜಿಲ್ಲಾಧಿಕಾರಿ ಜೆ.ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ರೇಣುಕಾಂಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಆರ್.ಧನರಾಜ್ ಹಾಜರಿದ್ದರು.