ಕೋಲಾರ: ನಗರದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮ ಸೇನೆಯಿಂದ ಶನಿವಾರ ದತ್ತಮಾಲಾ ನಡೆಯಿತು. ದೇವಾಲಯದ ಮುಂಭಾಗ ಗುರುಸ್ವಾಮಿ ಕೃಷ್ಣಪ್ಪ ದತ್ತಮಾಲಾದ ಪೂಜಾಕೈಂಕರ್ಯ ನೆರವೇರಿಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿನ ದತ್ತಪೀಠದ ದರ್ಶನಕ್ಕೆ ಮಾಲಾ ಧಾರಿಗಳಾಗಿ ತೆರಳುತ್ತಿರುವ ಭಕ್ತಾದಿಗಳಿಗೆ ದತ್ತಮಾಲೆ ಹಾಕಿದರು.
ಮಾಲಾಧಾರಿಗಳು ದತ್ತಾತ್ರೆಯರ ಭಜನೆ ಹಾಡಿದರೆ, ಶ್ರೀರಾಮಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಿಂದೂಪರ ಘೋಷಣೆ ಕೂಗಿದರು. ನಗರದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ದತ್ತಮಾಲಾಧಾರಿಗಳಿಂದ ಶೋಭಾಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಶ್ರೀರಾಮಸೇನೆಯ ಜಿಲ್ಲಾ ಘಟಕ ಅಧ್ಯಕ್ಷ ರಮೇಶ್ ರಾಜ್, ಗೌತಮ್, ಉಪಾಧ್ಯಕ್ಷ ಪ್ರವೀಣ್, ಕಾರ್ಯಕರ್ತರಾದ ಚಿನ್ನಪ್ಪಿ, ನವೀನ್, ಭಾರ್ಗವ್, ಸುಪ್ರಿತ್, ಹೇಮಂತ್, ಕಾರ್ತಿಕ್, ಜನಿತ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.