ಕಂಬದ ಮೇಲಿರುವ ದೀಪಕ್ಕೆ ವಿದ್ಯುತ್ ಸಂಪರ್ಕ ನೀಡುವ ತಂತಿಗಳನ್ನು ಸಣ್ಣ ಡಬ್ಬದಲ್ಲಿ ಹಾಕಬೇಕು. ನಗರಸಭೆ ಅದಕ್ಕೂ ವ್ಯವಸ್ಥೆ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಜೋಡಿ ರಸ್ತೆ ನಿರ್ಮಾಣವಾದ ಸಂದರ್ಭದಲ್ಲಿ ಗುತ್ತಿಗೆದಾರರು ಭೂಮಿಯೊಳಗೆ ಕೇಬಲ್ ಹಾಕಿ, ನಂತರ ಕಂಬದ ಒಳಗಿನಿಂದ ವಿದ್ಯುತ್ ದೀಪಗಳಿಗೆ ಸಂಪರ್ಕ ನೀಡಬೇಕಾಗಿತ್ತು. ದೀಪದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರರು ಕೆಲಸ ಮಾಡಲು ವಿಫಲರಾದಾಗ ಲೋಕೋಪಯೋಗಿ ಹಾಗೂ ನಗರಸಭೆ ಅಧಿಕಾರಿಗಳ ಮಧ್ಯೆ ಪತ್ರ ಸಮರವೇ ನಡೆದಿತ್ತು.
ರಸ್ತೆ ನಿರ್ಮಾಣವಾಗಿ ಬಹಳ ದಿನ ಜೋಡಿ ರಸ್ತೆಯ ಬಹಳಷ್ಟು ದೀಪಗಳು ಬೆಳಗಲೇ ಇಲ್ಲ. ನಂತರ ನಗರಸಭೆಯೇ ತಾತ್ಕಾಲಿಕ ವ್ಯವಸ್ಥೆ ಮಾಡಿ ದೀಪ ಹೊತ್ತಿಕೊಳ್ಳುವಂತೆ ಏರ್ಪಾಟು ಮಾಡಿತು. ಆದರೆ, ಅದನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಮಾಡಲು ವಿಫಲವಾಯಿತು.
ಜೋಡಿ ರಸ್ತೆ ಬಳಿ ಎರಡು ಖಾಸಗಿ ಶಾಲೆ, ಎರಡು ಸರ್ಕಾರಿ ಶಾಲೆಗಳಿವೆ. ವಿದ್ಯಾರ್ಥಿಗಳು ಆಕಸ್ಮಿಕವಾಗಿ ಅಥವಾ ಕುತೂಹಲಕ್ಕಾಗಿ ಈ ತಂತಿಗಳನ್ನು ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಅಲ್ಲದೆ ರಸ್ತೆಯಲ್ಲಿ ಓಡಾಡುವ ಬೀಡಾಡಿ ದನಗಳು ಮೈ ಉಜ್ಜಿಕೊಳ್ಳಲು ವಿದ್ಯುತ್ ಕಂಬಗಳಿಗೆ ಮೈ ಚಾಚುತ್ತವೆ. ಈ ನಿಟ್ಟಿನಲ್ಲೂ ವಿದ್ಯುತ್ ತಂತಿ ಅಪಾಯಕಾರಿ. ರಸ್ತೆಯೊಳಗೆ ಬಂದಿರುವ ತಂತಿಗಳು ವಾಹನಗಳ ಸುರಕ್ಷತೆಗೂ ಸಂಚಕಾರ ತರುವ ಹಾಗಿದೆ. ಆದರೂ ನಗರಸಭೆ ಈ ಕಡೆ ಗಮನ ಹರಿಸದಿರುವುದು ಶೋಚನೀಯ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.