ಶ್ರೀನಿವಾಸಪುರ: ತಾಲ್ಲೂಕಿನ ರಾಮಪುರ ಗ್ರಾಮದಲ್ಲಿ ಭಾನುವಾರ ಹಸಿರು ಹಬ್ಬವನ್ನು ಆಚರಿಸಲಾಯಿತು.
ಗ್ರಾಮದ ಆಂಜೇಯಸ್ವಾಮಿ ದೇಗುಲ ಎದುರು ಇಡಲಾದ ವಿವಿಧ ಜಾತಿಯ ಸಸಿಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು.
ಬಳಿಕ ಗ್ರಾಮಸ್ಥರು ಸಸಿಗಳನ್ನು ಪರಿಸರವಾದಿ ಎಸ್.ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಹೊರ ವಲಯದ ರಸ್ತೆ ಬದಿಯಲ್ಲಿ ನೆಟ್ಟರು.
ಸಸಿ ನೆಡುವ ಮುನ್ನ ಗ್ರಾಮದ ಮಹಿಳೆಯರು ಸೇರಿದಂತೆ ಎ್ಲ್ಲಲ ವಯೋಮಾನದ ವ್ಯಕ್ತಿಗಳು ದೇಗುಲದ ಎದುರು ಸೇರಿ ನಾಟಿ ಮಾಡಿದ ಸಸಿಗಳನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಂಡರು.
ಈ ಸಂದರ್ಭದಲ್ಲಿ ಎಸ್.ಅಶೋಕ್ ಕುಮಾರ್ ಮಾತನಾಡಿ, ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ಹಬ್ಬ ಆಚರಿಸಲಾಗುತ್ತಿದೆ. ಈಗಾಗಲೇ ಕಾಡುಗಳನ್ನು ನಾಶಪಡಿಸಿದ್ದಕ್ಕಾಗಿ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ. ಸಾಧ್ಯವಿರುವ ಸ್ಥಳದಲ್ಲಿ ಗಿಡಮರಗಳನ್ನು ಬೆಳೆಸದಿದ್ದರೆ ಇನ್ನಷ್ಟು ದುಷ್ಟರಿಣಾ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಘುನಾರಾಯಣ ರೆಡ್ಡಿ, ಸೋಮಶೇಖರ ರೆಡ್ಡಿ, ಮಂಜುನಾಥರೆಡ್ಡಿ, ವೇಣುಗೋಪಾಲ್, ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ಪದ್ಮಮ್ಮ, ಲೇಖಕ ಬಟ್ಟುವಾರಿಪಲ್ಲಿ ಉಪೇಂದ್ರ ಮತ್ತಿತರರು ಹಬ್ಬದಲ್ಲಿ ಭಾಗವಹಿಸಿದ್ದರು.
ಹಸಿರು ಹಬ್ಬ ಮೆರವಣಿಗೆ ಮುಂಚೂಣಿಯಲ್ಲಿ ಸ್ಥಳೀಯ ಜಾನಪದ ಕಲಾವಿದರಿಂದ ಏರ್ಪಡಿಸಿದ್ದ ಹಲಗೆ ವಾದನ ನೋಡುಗರ ಗಮನ ಸೆಳೆಯಿತು. ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸುವುದರ ಮೂಲಕ ಪರಿಸರ ಪ್ರೇಮ ಮೆರೆದದ್ದು ವಿಶೇಷವಾಗಿತ್ತು.