ಕನಕಗಿರಿ: ‘ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಸಮುದಾಯದವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತ ಮೊಂಡಲ್ ಖಾನ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಉಪ ತಹಶೀಲ್ದಾರ್ಗೆ ಶನಿವಾರ ಮನವಿ ಸಲ್ಲಿಸಿದರು.
ಬಿಜೆಪಿ ಮಂಡಲದ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ ಬಸರಿಗಿಡದ ಮಾತನಾಡಿ,‘ಶೋಷಿತ ಸಮಾಜದ ಪರಿಶಿಷ್ಟ ಜಾತಿಯವರು ಭಿಕ್ಷುಕರಾಗಿದ್ದಾರೆ ಎಂದು ಹೇಳುವ ಮೂಲಕ ಸುಜಾತ ಅಜ್ಞಾನ ಪ್ರದರ್ಶಿಸಿದ್ದಾರೆ’ ಎಂದು ದೂರಿದರು.
ಪರಿಶಿಷ್ಟರು ಸ್ವಾಭಿಮಾನಿಗಳು, ಶ್ರಮ ಜೀವಿಗಳಾಗಿದ್ದಾರೆ. ಕೂಲಿ ಮಾಡಿ ತಿನ್ನುವ ಪ್ರವೃತ್ತಿ ಹೊಂದಿದ್ದಾರೆ. ಇವರ ಹೇಳಿಕೆ ದ್ವೇಷದ ಮನೋಭಾವದಿಂದ ಕೂಡಿದೆ’ ಎಂದು ತಿಳಿಸಿದರು.
‘ಈ ಮಹಿಳೆ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ರವಿ ಭಜಂತ್ರಿ , ಸುಭಾಸ ಕಂದಕೂರ, ಪ್ರಮುಖರಾದ ದುರಗಪ್ಪ ಲಕ್ಕುಂಪುರ, ಟಿ.ಜೆ.ಶ್ರೀನಿವಾಸ, ಕಂಠಿ ಮ್ಯಾಗಡೆ, ತಿಮ್ಮಣ್ಣ, ಶರಣಪ್ಪ ಕನ್ನೆರಮಡಗು, ರಂಗಪ್ಪ ಕೊರಗಟಗಿ ಹಾಗೂ ಅರುಣಕುಮಾರ ಇದ್ದರು.
ಉಪ ತಹಶೀಲ್ದಾರ್ ಶಿವಕುಮಾರ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.