ಕವಲೂರು (ಕೊಪ್ಪಳ): ‘ಕಟ್ಟಡ ಕಾರ್ಮಿಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದು ಸಂತಸ ತಂದಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ ಹೇಳಿದರು.
ತಾಲ್ಲೂಕಿನ ಕವಲೂರುಗ್ರಾಮದಲ್ಲಿರಾಜ್ಯ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕೋವಿಡ್ ಲಸಿಕೆ ಜಾಗೃತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ತಮ್ಮ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಹೆಂಡತಿ-ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರವಹಿಸಬೇಕು. ತಾವು ಮತ್ತು ತಮ್ಮ ಹೆಂಡತಿ, ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಕೊರೊನಾ ಮಹಾಮಾರಿ ಬರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ ಮಾತನಾಡಿ,‘ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಕಾರ್ಮಿಕರು ಕನಿಷ್ಠ ತಿಂಗಳಲ್ಲಿ ಒಂದು ಸಲವಾದರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಇದರಿಂದ ಮುಂದೆ ಆಗುವ ಅನಾಹುತ ತಪ್ಪಿಸಲು ಸಾಧ್ಯ’ ಎಂದು ಹೇಳಿದರು.
ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ,‘ಕಟ್ಟಡ ಕಾರ್ಮಿಕರು ಹೊಟ್ಟೆ ಪಾಡಿಗೆ ಎಲ್ಲೆಲ್ಲೂ ದುಡಿಯಲು ಹೋಗುತ್ತಾರೆ. ಅಲ್ಲಿ ಬರುವಂತಹ ಕಾರ್ಮಿಕರಿಗೆ ಮತ್ತು ಇನ್ನಿತರರಿಗೆ ಸೊಂಕು ಇರುವ ಬಗ್ಗೆ ತಿಳಿದಿರುವುದಿಲ್ಲ. ಕಾರ್ಮಿಕರು ಪ್ರತಿಯೊಬ್ಬರಿಂದ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು. ಬೆಳಿಗ್ಗೆ ಮನೆಯಿಂದ ಹೋಗುವಾಗ ಸ್ನಾನಮಾಡಿ ಸ್ವಚ್ಛವಾಗಿ ಹೋಗಬೇಕು. ಕೆಲಸದಿಂದ ಮನೆಗೆ ಬಂದಾಗ ಸ್ವಚ್ಛತೆಯಿಂದ ಕುಟುಂಬದಲ್ಲಿ ಬೆರೆಯಬೇಕು’ ಎಂದರು.
ವೈದ್ಯಾಧಿಕಾರಿ ಪ್ರವೀಣ್ ಕುಮಾರ್ ಗುತ್ತೇದಾರ್, ಡಾ.ಗವಿಸಿದ್ದಯ್ಯ ಭೂಸನೂರುಮಠ ಮಾತನಾಡಿದರು.
ಶರಣಯ್ಯ, ಅಶೋಕ್ ಕಾಮೋಜಿ, ಶಂಶುದ್ದಿನ್ ಮಕಾಂದಾರ್, ರಾಜಾಸಾಬ್ ತಹಶೀಲ್ದಾರ್, ಮಹಾಲಿಂಗಯ್ಯ ಜಿ. ಸಿಂದೋಗಿಮಠ, ಯಮನೂರು ಸಾಬ್ ನದಾಫ್ ಹಾಗೂ ಪಾನಿಶಾ ಮಕಾಂದಾರ್ ಇದ್ದರು.