ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಕಳೆದ ವಾರ ಕೊಲೆಗೀಡಾದ ಅನುಶ್ರೀ ಸಾವಿನ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಕಿನ್ನಾಳ ಗ್ರಾಮಸ್ಥರು ಆಗ್ರಹಿಸಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಪತ್ರವನ್ನು ಹೆಚ್ಚುವರಿ ಎಸ್.ಪಿ. ಹೇಮಂತಕುಮಾರ್ ಅವರಿಗೆ ಸಲ್ಲಿಸಿದರು.
‘ಕರಕುಶಲತೆಯಲ್ಲಿ ದೇಶದಲ್ಲೆ ಹೆಸರು ಮಾಡಿರುವ ಕಿನ್ನಾಳ ಗ್ರಾಮದಲ್ಲಿ ಬಾಲಕಿ ಹತ್ಯೆಯಾಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಗ್ರಾಮದ ಜನರ ಮಾನಸಿಕ ನೆಮ್ಮದಿಯೂ ಹಾಳಾಗಿದೆ. ಆದ್ದರಿಂದ ಆದಷ್ಟು ಬೇಗನೆ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು’ ಎಂದು ಆಗ್ರಹಿಸಿದ್ದಾರೆ.